ದುಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಅವರನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿ ಅಯ್ಕೆ ಮಾಡಲಾಗಿದೆ. ಬುಧವಾರ ಐಸಿಸಿಯು ಪ್ರಕಟಿಸಿರುವ ನಾಲ್ವರು ರಾಯಭಾರಿಗಳಲ್ಲಿ ಶಿಖರ್ ಕೂಡ ಒಬ್ಬರಾಗಿದ್ದಾರೆ.
ಫೆ. 19ರಿಂದ 9ರವರೆಗೆ ಟೂರ್ನಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ವಿಶ್ವಶ್ರೇಷ್ಠ ಎಂಟು ತಂಡಗಳು ಸ್ಪರ್ಧಿಸಲಿರುವ ಪ್ರತಿಷ್ಠಿತ ಟೂರ್ನಿ ಇದಾಗಿದೆ. ಶಿಖರ್ ಅವರಲ್ಲದೇ 2017ರ ಚಾಂಪಿಯನ್ ಪಾಕಿಸ್ತಾನ ತಂಡದ ನಾಯಕರಾಗಿದ್ದ ಸರ್ಫರಾಜ್ ಅಹಮದ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಮತ್ತು ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ಅವರನ್ನೂ ನೇಮಕ ಮಾಡಲಾಗಿದೆ.
ರಾಯಭಾರಿಗಳು ಪಂದ್ಯಗಳನ್ನು ವೀಕ್ಷಿಸುವರು ಹಾಗೂ ಅತಿಥಿ ಅಂಕಣಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವರು.
‘ಇದು ಬಹಳ ವಿಶೇಷವಾದ ಅನುಭೂತಿಯನ್ನು ಕೊಡುತ್ತಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾಗವಾಗುತ್ತಿರುವುದು ಹೆಮ್ಮೆಯ ಸಂಗತಿ. ರಾಯಭಾರಿಯಾಗಿರುವ ಗೌರವ ಲಭಿಸಿರುವುದು ಸಂತಸ ತಂದಿದೆ’ ಎಂದು ಧವನ್ ಐಸಿಸಿ ನೀಡಿರುವ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಎರಡು ಆವೃತ್ತಿಗಳಲ್ಲಿ 701 ರನ್ ಗಳಿಸಿರುವ ದಾಖಲೆ ಶಿಖರ್ ಅವರದ್ದು. ಅಲ್ಲದೇ ಸತತವಾಗಿ ಎರಡು ಬಾರಿ ಚಿನ್ನದ ಬ್ಯಾಟ್ ಗೌರವಕ್ಕೂ ಪಾತ್ರರಾಗಿದ್ದರು. 2013ರ ಟೂರ್ನಿಯಲ್ಲಿ ಅವರು ಸರ್ವಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಶತಕಗಳನ್ನು ಹೊಡೆದ ಶ್ರೇಯ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.