ಚೆನ್ನೈ: ಕೊರೊನಾ ವೈರಸ್ ಭೀತಿಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮುಂದೂಡಲಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ತಮ್ಮ ತವರೂರು ರಾಂಚಿಗೆ ಮರಳಿದ್ದಾರೆ.
ಮಾರ್ಚ್ 29ರಿಂದ ಆರಂಭವಾಗಲಿದ್ದ ಟೂರ್ನಿಯನ್ನು ಬಿಸಿಸಿಐ ಏಪ್ರಿಲ್ 15ರವರೆಗೆ ಮುಂದೂಡಿದೆ. ಈಚೆಗೆ ಇಲ್ಲಿ ಆರಂಭವಾಗಿದ್ದ ಸಿಎಸ್ಕೆ ತಂಡದ ಅಭ್ಯಾಸ ಶಿಬಿರದಲ್ಲಿ ಧೋನಿ ಕೂಡ ಭಾಗವಹಿಸಿದ್ದರು. ಭಾನುವಾರ ಅಭ್ಯಾಸಕ್ಕೆ ಬಂದ ಅವರನ್ನು ಸ್ಥಳದಲ್ಲಿದ್ದ ಅಭಿಮಾನಿಗಳು ಹುರಿದುಂಬಿಸಿದರು.
ಕ್ರೀಡಾಂಗಣವನ್ನು ತೊರೆಯುವ ಮುನ್ನ ಧೋನಿಯವರು ಅಭಿಮಾನಿಗಳ ಆಟೋಗ್ರಾಫ್ಗೆ ಹಸ್ತಾಕ್ಷರ ಹಾಕಿದರು. ಕೆಲವರೊಂದಿಗೆ ಮಾತನಾಡಿದರು.
ಸಿಎಸ್ಕೆ ಫ್ರ್ಯಾಂಚೈಸ್ನ ಟ್ವಿಟರ್ನಲ್ಲಿ ಧೋನಿ ತಮ್ಮ ತವರಿಗೆ ಮರಳುತ್ತಿರುವ ವಿಡಿಯೋ ಹಾಕಿದೆ. ‘ಇದು (ಚೆನ್ನೈ) ನಿಮ್ಮ ತವರುಮನೆಯಾಗಿದೆ. ತಾಲಾ ಧೋನಿ ನಿಮಗೆ ಕೃತಜ್ಞತೆಗಳು’ ಎಂದು ಬರೆದಿದೆ.
38 ವರ್ಷದ ಧೋನಿ ಅವರಿಗೆ ಈ ಬಾರಿಯ ಐಪಿಎಲ್ ಬಹುಏಕ ಕೊನೆಯದು ಎಂದು ಹೇಳಲಾಗುತ್ತಿದೆ. ಹೋದ ವರ್ಷ ಇಂಗ್ಲೆಂಡ್ನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಸೆಮಿಫೈನಲ್ನಲ್ಲಿ ಸೋತಿತ್ತು. ಆ ಪಂದ್ಯದ ನಂತರ ಅವರು ತಂಡಕ್ಕೆ ಮರಳಿಲ್ಲ.
ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಆಡಬೇಕಾದರೆ, ಐಪಿಎಲ್ನಲ್ಲಿ ಅವರು ತೋರುವ ಆಟ ಮತ್ತು ಫಿಟ್ನೆಸ್ ಸಾಮರ್ಥ್ಯವು ಪ್ರಮುಖವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.