ADVERTISEMENT

ನವದೆಹಲಿ | ಬಿಸಿಸಿಐ ಮುಂದೆ ಐಸಿಸಿಯೂ ಅಸಹಾಯಕ: ಆಫ್ರಿದಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 6:26 IST
Last Updated 17 ಫೆಬ್ರುವರಿ 2023, 6:26 IST
ಶಾಹೀದ್ ಆಫ್ರಿದಿ
ಶಾಹೀದ್ ಆಫ್ರಿದಿ   

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೂಡ ನಿಸ್ಸಹಾಯಕವಾಗಿದೆ. ಏಷ್ಯಾ ಕಪ್ ಆಯೋಜನೆಯ ವಿಷಯದಲ್ಲಿ ಐಸಿಸಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಆಫ್ರಿದಿ ಹೇಳಿದ್ದಾರೆ.

ಇದೇ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಲು ಬಿಸಿಸಿಐ ನಿರಾಕರಿಸಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಎಚ್ಚರಿಸಿದ್ದಾರೆ. ಬಿಸಿಸಿಐ ವಿರುದ್ಧ ಐಸಿಸಿಗೂ ದೂರು ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಫ್ರಿದಿ, ‘ಈ ವಿಷಯದಲ್ಲಿ ಐಸಿಸಿಯ ಪಾತ್ರ ಬಹಳ ಮಹತ್ವದ್ದು. ಆದರೆ ಬಿಸಿಸಿಐ ಮುಂದೆ ಐಸಿಸಿಯು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಸಮಾ ಟಿ.ವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

‘ಯಾರೇ ಆಗಲಿ ತಮ್ಮ ಸ್ವಂತ ಬಲದ ಮೇಲೆ ನಿಲ್ಲದಿದ್ದರೆ ಇಂತಹ ವಿಷಯಗಳಲ್ಲಿ ನಿರ್ಣಾಯಕರಾಗಿ ಹೊರಹೊಮ್ಮುವುದು ಕಷ್ಟ. ಬಿಸಿಸಿಐ ಸರ್ವರೀತಿಯಲ್ಲಿಯೂ ಬಲಾಢ್ಯವಾಗಿ ಬೆಳೆದಿದೆ. ಅದರಿಂದಾಗಿ ಯಾವುದೇ ಸವಾಲಿಗೂ ಎದೆಯೊಡ್ಡಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಂಡಿದೆ’ ಎಂದರು.

‘ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲವೆಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿರುವುದು ಸಹಜ. ಆದರೆ ಅಂತಹ ಸಾಧ್ಯತೆ ಇದೆ ಎಂದು ನನಗನಿಸುವುದಿಲ್ಲ. ಏಷ್ಯಾಕಪ್ ಟೂರ್ನಿಯ ಆಯೋಜನೆಯ ಸ್ಥಳ ಬದಲಾವಣೆಯಾದರೂ ಅಚ್ಚರಿಪಡಬೇಕಿಲ್ಲ. ಈ ರೀತಿ ಮುಂಚೆಯೂ ಆಗಿದೆ’ ಎಂದೂ ಆಫ್ರಿದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.