ADVERTISEMENT

ಕ್ರಿಕೆಟ್‌ ಲೋಕದ ಮನ ಗೆದ್ದ ‘ಸಾವಿರದ‘ ಫಲಕ

ಆರ್‌ಸಿಬಿ ಪಂದ್ಯ ವೀಕ್ಷಣೆಗೆ ಬೆಂಗಳೂರಿನಿಂದ ಮುಂಬೈಗೆ ಪಯಣಿಸಿದ ದಂಪತಿ, ಗೆಳೆಯರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 16:12 IST
Last Updated 18 ಏಪ್ರಿಲ್ 2022, 16:12 IST
ಪಂದ್ಯದ ಸಂದರ್ಭದಲ್ಲಿ ಶಿಲ್ಪಾ (ಎಡತುದಿ), ಅರ್ಚಿತ್‌ ಮತ್ತು ಗೆಳೆಯರು –ಟ್ವಿಟರ್ ಚಿತ್ರ
ಪಂದ್ಯದ ಸಂದರ್ಭದಲ್ಲಿ ಶಿಲ್ಪಾ (ಎಡತುದಿ), ಅರ್ಚಿತ್‌ ಮತ್ತು ಗೆಳೆಯರು –ಟ್ವಿಟರ್ ಚಿತ್ರ   

ಬೆಂಗಳೂರು: ಮೊದಲ ಬಾರಿ ಕ್ರೀಡಾಂಗಣದಲ್ಲಿ ‘ಲೈವ್’ ಆಗಿ ಪಂದ್ಯ ನೋಡಿದ ಅನುಭವದ ಖುಷಿಯನ್ನು ಸಾವಿರ ಪಟ್ಟು ಹೆಚ್ಚಿಸಿದ್ದು ಒಂದೇ ಒಂದು ಫಲಕ...

ಕಳೆದ ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಪ್ರದರ್ಶನಗೊಂಡ ಆ ಫಲಕ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಂದಿನ ಪಂದ್ಯದ ಶ್ರೇಷ್ಠ ಆಟಗಾರನಿಂದಲೇ ಟ್ವಿಟರ್‌ನಲ್ಲಿ ಪ್ರಶಂಸೆಗೆ ಒಳಗಾಗಿದೆ.

ಒಂದು ಫಲಕದ ಮೂಲಕ ಗಮನ ಸೆಳೆದ ಆ ಜೋಡಿ ಬೆಂಗಳೂರಿನ ಶಿಲ್ಪಾ ಶೇಷಾದ್ರಿ ಮತ್ತು ಅರ್ಚಿತ್‌. ಬಸವನಗುಡಿ ನಿವಾಸಿಗಳಾದ ಈ ದಂಪತಿ ಪಂದ್ಯ ವೀಕ್ಷಿಸಲು ಇಬ್ಬರು ಗೆಳೆಯರೊಂದಿಗೆ ಕಾರಿನಲ್ಲಿ ಮುಂಬೈಗೆ ತೆರಳಿದ್ದರು. ಹೀಗಾಗಿ ಪಂದ್ಯ ನಡೆಯುತ್ತಿದ್ದ ವೇಳೆ ‘ಆರ್‌ಸಿಬಿ, ನಿನಗಾಗಿ ಸಾವಿರ ಕಿಲೋಮೀಟರ್ ಪಯಣಿಸಿ ಬಂದಿದ್ದೇವೆ’ ಎಂದು ಬರೆದ ಫಲಕ ಪ್ರದರ್ಶಿಸಿದ್ದರು. ‘ಈ ಸಲ ಕಪ್‌ ನಮ್ದೆ‘ ಎಂಬ ಒಕ್ಕಣೆಯೂ ಅದರಲ್ಲಿತ್ತು.

ADVERTISEMENT

ಆ ಫಲಕ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಆಂಗ್ಲ ಮಾಧ್ಯಮಗಳ ವೆಬ್‌ಸೈಟ್‌ಗಳಲ್ಲಿ ಸುದ್ದಿಯೂ ಪ್ರಕಟಗೊಂಡಿತು. ಹಾಗೆ ಒಂದು ಪಂದ್ಯ ಮತ್ತು ಒಂದು ಫಲಕದಿಂದಾಗಿ ಶಿಲ್ಪಾ–ಅರ್ಚಿತ್ ಸಂಚಲನ ಸೃಷ್ಟಿಸಿದರು. ಅಂದು ಪಂದ್ಯದ ಶ್ರೇಷ್ಠ ಪ್ರಶಸ್ತಿ ಪಡೆದ ದಿನೇಶ್ ಕಾರ್ತಿಕ್ ಅವರು ಈ ಕುರಿತ ಟ್ವೀಟ್‌ಗೆ ಉತ್ತರಿಸಿ ‘ನಿಮ್ಮ ಪಯಣ ಸಾರ್ಥಕವಾಯಿತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದೇವೆ. ಇದೇ ಮೊದಲ ಬಾರಿ ಕ್ರೀಡಾಂಗಣದಲ್ಲಿ ನೇರವಾಗಿ ಪಂದ್ಯ ನೋಡಿದೆ. ಸಚಿನ್ ತೆಂಡೂಲ್ಕರ್‌ ಸ್ಟ್ಯಾಂಡ್‌ನಲ್ಲಿ ಟಿಕೆಟ್‌ ಲಭಿಸಿತ್ತು. ಖಾಲಿ ಕೈಯಲ್ಲಿ ಹೋಗುವುದು ಸರಿಯಲ್ಲ ಎಂದುಕೊಂಡು ಮಧ್ಯಾಹ್ನ ಫಲಕ ಪ್ರಿಂಟ್ ಹಾಕಿಸಿಕೊಂಡಿದ್ದೆವು. ಅದು ಇಷ್ಟೊಂದು ಸದ್ದು ಮಾಡುತ್ತದೆ ಎಂದುಕೊಂಡಿರಲಿಲ್ಲ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿಲ್ಪಾ ಹೇಳಿದರು.

ಶಿಲ್ಪಾ, ಬೆಂಗಳೂರಿನ ಐಟಿ ಕಂಪನಿಯೊಂದರ ಉದ್ಯೋಗಿಯಾಗಿದ್ದು ಅರ್ಚಿತ್, ಫ್ಲಿಪ್‌ಕಾರ್ಟ್‌ನಲ್ಲಿ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.