ಕೋಲ್ಕತ್ತ: ತರಬೇತಿ ಶಿಬಿರಗಳು ಆರಂಭವಾದ ಬಳಿಕ ಸೀನಿಯರ್ ಹಾಗೂ 23 ವರ್ಷದೊಳಗಿನವರ ತಂಡಗಳ ಆಟಗಾರರನ್ನು ಕಡ್ಡಾಯವಾಗಿ ನೇತ್ರ ತಪಾಸಣೆಗೆ ಒಳಪಡಿಸಲು ಬಂಗಾಳ ಕ್ರಿಕೆಟ್ ಸಂಸ್ಥೆಯು (ಸಿಎಬಿ) ನಿರ್ಧರಿಸಿದೆ.
ಸಿಎಬಿ ಅಧಿಕಾರಿಗಳು ಹಾಗೂ ಕೋಚ್ಗಳ ನಡುವೆ ಮಂಗಳವಾರ ನಡೆದ ಚರ್ಚೆಯ ವೇಳೆ ಮುಖ್ಯ ಕೋಚ್ ಅರುಣ್ ಲಾಲ್ ಅವರು ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ.
‘ಲಾಕ್ಡೌನ್ನಿಂದಾಗಿ ಆಟಗಾರರು ಸುಮಾರು ಎರಡೂವರೆ ತಿಂಗಳುಗಳಿಂದಲೂ ಮನೆಯಲ್ಲೇ ಇದ್ದಾರೆ. ಅವರು ತರಬೇತಿಗೆ ಮರಳಿದ ಬಳಿಕ ದೃಷ್ಟಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿಯೇ ಎಲ್ಲರಿಗೂ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಸಿಎಬಿ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ.
‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾರ್ಗಸೂಚಿಗಳನ್ನು ಎದುರು ನೋಡುತ್ತಿದ್ದೇವೆ. ಆಟಗಾರರು ಹಾಗೂ ನೆರವು ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಕೂಡ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.
‘ಕ್ರಿಕೆಟ್ನಲ್ಲಿ ಕೈ ಮತ್ತು ಕಣ್ಣಿನ ಸಮನ್ವಯ ಬಹಳ ಅಗತ್ಯ. ದೃಷ್ಟಿ ದೋಷವಿದ್ದರೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಿದೆ.ಹೀಗಾಗಿ ಎಲ್ಲರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದು ಸ್ವಾಗತಾರ್ಹ ನಿರ್ಧಾರ’ ಎಂದು ಹಿರಿಯ ಕ್ರಿಕೆಟಿಗ ದೀಪ್ದಾಸ್ ಗುಪ್ತಾ ನುಡಿದಿದ್ದಾರೆ.
‘ಪಂದ್ಯದ ವೇಳೆ ಆಟಗಾರರು ಸುಲಭವಾಗಿ ಕ್ಯಾಚ್ಗಳನ್ನು ಕೈಚೆಲ್ಲುತ್ತಾರೆ. ತಮ್ಮತ್ತ ಸಾಗಿಬಂದ ಚೆಂಡನ್ನು ಬೇಗನೆ ಗುರುತಿಸುವಲ್ಲಿ ಎಡವುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ನೇತ್ರ ತಪಾಸಣೆಯನ್ನು ಕಡ್ಡಾಯ ಮಾಡಿದ್ದೇವೆ’ ಎಂದು ಸಿಎಬಿಯ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಮ್ಯಾನೇಜರ್ ಜಾಯ್ದೀಪ್ ಮುಖರ್ಜಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.