ದುಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಬಳಿಕ ಎಲ್ಲ ಮಾದರಿಯ ಕ್ರಿಕೆಟ್ಗೂ ಮಹೇಂದ್ರ ಸಿಂಗ್ ಧೋನಿ ವಿದಾಯ ಸಲ್ಲಿಸಲಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ವದಂತಿಗಳು ಹರಿದಾಡುತ್ತಿವೆ.
ಈ ಕುರಿತಾಗಿ ಸ್ವತಃ ಧೋನಿ, ಚೆನ್ನೈಯಲ್ಲಿ ಕೊನೆಯ ಪಂದ್ಯ ಆಡುವ ಬಗ್ಗೆ ಆಶಾದಾಯಕವಾಗಿದ್ದೇನೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದರಿಂದ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಪಿಎಲ್ನಲ್ಲಿ ಧೋನಿ ಆಡುವುದು ಬಹುತೇಕ ಖಚಿತವೆನಿಸಿದೆ.
ಯುಎಇನಲ್ಲಿ ಸಾಗುತ್ತಿರುವ ಎರಡನೇ ಹಂತದ ಟೂರ್ನಿಯ ವೇಳೆ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ 40 ವರ್ಷದ ಧೋನಿ, 'ವಿದಾಯದ ವಿಷಯಕ್ಕೆ ಬಂದಾಗ, ನೀವು ಇನ್ನೂ ಬಂದು ನಾನು ಸಿಎಸ್ಕೆಗಾಗಿ ಆಡುವುದನ್ನು ನೋಡಬಹುದು. ಅದು ನನ್ನ ವಿದಾಯದ ಪಂದ್ಯವಾಗಿರಬಹುದು. ಆದ್ದರಿಂದ ನನಗೆ ವಿದಾಯ ಹೇಳಲು ನಿಮಗೆ ಅವಕಾಶ ದೊರಕಲಿದೆ. ನಾವು ಚೆನ್ನೈಗೆ ಬರುತ್ತೇವೆ ಮತ್ತು ಅಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ. ಅಭಿಮಾನಿಗಳನ್ನು ಕೂಡ ಭೇಟಿ ಮಾಡಲಿದ್ದೇನೆ' ಎಂದು ಹೇಳಿದ್ದಾರೆ.
ಅದೇ ಹೊತ್ತಿಗೆ ಚೆನ್ನೈ ತಂಡವು ಕಾರ್ಯವಿಧಾನದಲ್ಲಿ ನಂಬಿಕೆಯನ್ನಿಡುವ ತಂಡವಾಗಿದೆ ಎಂದು ಹೇಳಿದರು. 'ನಾವು ಒಬ್ಬರನ್ನೊಬ್ಬರ ಯಶಸ್ಸನ್ನು ಆಚರಿಸುತ್ತೇವೆ. ನಮ್ಮ ಸಾಮರ್ಥಕ್ಕೆ ತಕ್ಕ ಆಟವಾಡಿದರೆ ಯಾವುದೇ ಎದುರಾಳಿಯನ್ನು ಸೋಲಿಸಬಹುದೆಂಬ ನಂಬಿಕೆಯಿದೆ. ಎದುರಾಳಿಗಳು ನಮ್ಮನ್ನು ಸೋಲಿಸಬೇಕಾದರೆ ನಮಗಿಂತಲೂ ಉತ್ತಮವಾದ ಕ್ರಿಕೆಟ್ ಆಡಬೇಕು' ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಐಪಿಎಲ್ನಲ್ಲಿ ಪ್ಲೇ-ಆಫ್ಗೆ ತಲುಪಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಚೆನ್ನೈ ಪಾತ್ರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.