ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದುಹೋಗುವ ಯೋಚನೆಯನ್ನು ತಾವೆಂದಿಗೂ ಮಾಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದಲೂ ವಿರಾಟ್ ಆರ್ಸಿಬಿ ತಂಡದಲ್ಲಿದ್ದಾರೆ. ಕೆಲವು ವರ್ಷಗಳಿಂದ ತಂಡದ ನಾಯಕರಾಗಿದ್ದಾರೆ. ಆರ್ಸಿಬಿಯಲ್ಲಿ ಮೊದಲಿನಿಂದಲೂ ಇರುವ ಏಕೈಕ ಆಟಗಾರನೆಂಬ ಹೆಗ್ಗಳಿಕೆ ಅವರದ್ದು.
‘ತಂಡದೊಂದಿಗೆ 12 ವರ್ಷಗಳ ಪ್ರಯಾಣವು ಅಮೋಘವಾಗಿದೆ. ಲಕ್ಷಾಂತರ ಅಭಿಮಾನಿಗಳ ಪ್ರೀತಿ, ಅಭಿಮಾನವನ್ನು ಗಳಿಸಿದ್ದೇನೆ. ಈ ಅನುಭವ ಅಮೂಲ್ಯವಾದದ್ದು. ಇಲ್ಲಿ ಕಲಿತ ಪಾಠಗಳು ಅತ್ಯಮೂಲ್ಯವಾಗಿವೆ’ ಎಂದು ಆರ್ಸಿಬಿ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಕೊಹ್ಲಿ ಹೇಳಿದ್ದಾರೆ.
ಖ್ಯಾತನಾಮ ಆಟಗಾರರಿದ್ದರೂ ಆರ್ಸಿಬಿಯು ಐಪಿಎಲ್ನಲ್ಲಿ ಇದುವರೆಗೆ ಒಂದೂ ಬಾರಿಯೂ ಪ್ರಶಸ್ತಿ ಗೆದ್ದಿಲ್ಲ.
ಈ ಕುರಿತು ಮಾತನಾಡಿರುವ ಕೊಹ್ಲಿ, ‘ಮೂರು ಸಲ ನಾವು ಪ್ರಶಸ್ತಿ ಸನಿಹ ಹೋಗಿದ್ದೇವೆ. ಆದರೆ ಕೈಗೆಟುಕಿಲ್ಲ. ನಮ್ಮ ತಂಡಕ್ಕೆ ಇರುವ ಏಕೈಕ ಗುರಿ ಎಂದರೆ ಪ್ರಶಸ್ತಿ ಗೆಲ್ಲುವುದು. ಬೆಂಗಳೂರು ನೀಡಿರುವ ಪ್ರೀತಿಗೆ ಪ್ರಶಸ್ತಿ ಕಾಣಿಕೆ ನೀಡುವದು. ಆರ್ಸಿಬಿ ಫ್ರ್ಯಾಂಚೈಸ್ ತೋರಿರುವ ವಿಶ್ವಾಸ ಮತ್ತು ಕಾಳಜಿಗೆ ಸರಿಸಾಟಿಯೇ ಇಲ್ಲ ’ ಎಂದು ನುಡಿದಿದ್ದಾರೆ.
‘ಐದು ತಿಂಗಳ ಹಿಂದೆ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ಬಂದಾಗ ನಾನು ನೆಟ್ಸ್ನಲ್ಲಿ ಅಭ್ಯಾಸ ಮಾಡಿದ್ದೆ. ಆ ಸರಣಿಯ ಮೊದಲ ಪಂದ್ಯವು ಧರ್ಮಶಾಲಾದಲ್ಲಿ ಮಳೆಗೆ ಮುಳುಗಿತ್ತು. ನಂತರ ನಾವು ಲಖನೌನಲ್ಲಿ ನಡೆಯಲಿದ್ದ ಪಂದ್ಯಕ್ಕೆ ತೆರಳಿದ್ದವು. ಆಗ ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ಟೂರ್ನಿ ರದ್ದಾಗಿತ್ತು. ನಾವೆಲ್ಲ ಮನೆಗೆ ಮರಳಿದ್ದೆವು. ಅದು ಬಿಟ್ಟರೆ ಈಗಲೇ ನೆಟ್ಸ್ನಲ್ಲಿ ಆಡುತ್ತಿದ್ದೇನೆ’ ಎಂದು ವಿರಾಟ್ ಹೇಳಿದರು.
ಐಪಿಎಲ್ನಲ್ಲಿ ವಿರಾಟ್ 177 ಪಂದ್ಯಗಳನ್ನು ಆಡಿದ್ದಾರೆ. 5412 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ ಐದು ಶತಕ ಮತ್ತು 36 ಅರ್ಧಶತಕಗಳು ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.