ಲಂಡನ್: ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ತಲೆದೋರಿರುವ ಬಿಕ್ಕಟ್ಟು ಮುಂದುವರಿದಿದೆ. ಈ ನಡುವೆ ಲಂಕಾ ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿ ಶ್ರೀಲಂಕಾದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಆದರೆ ಲಂಕಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಕಾದು ನೋಡುವ ತಂತ್ರವನ್ನು ಬಿಸಿಸಿಐ ಅನುಸರಿಸಿದೆ.
ಈ ಕುರಿತಾಗಿ ಸುದ್ದಿಸಂಸ್ಥೆ 'ಎಎನ್ಐ'ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಮೇಲೆ ನಿಗಾ ವಹಿಸಲಾಗಿದೆ. ಸದ್ಯ ಲಂಕಾದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಆಡುತ್ತಿದೆ. ಶ್ರೀಲಂಕಾ ತಂಡವು ಉತ್ತಮವಾಗಿ ಆಡುತ್ತಿದೆ. ಒಂದು ತಿಂಗಳು ಕಾಯೋಣ ಎಂದು ಹೇಳಿದರು.
ವಿರಾಟ್ ಬೆಂಬಲಕ್ಕೆ ನಿಂತ ದಾದಾ...
ಏತನ್ಮಧ್ಯೆ ಕಳಪೆ ಲಯದಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ದಾದಾ ಬೆಂಬಲ ಸೂಚಿಸಿದರು.
ಕ್ರೀಡೆಯಲ್ಲಿ ಇಂತಹ ಸಂಗತಿಗಳು ಆಗುತ್ತಿರುತ್ತವೆ. ಇದು ಸಚಿನ್, ದ್ರಾವಿಡ್, ನನಗೆ ಸೇರಿದಂತೆ ಎಲ್ಲರಿಗೂ ಸಂಭವಿಸಿದೆ. ಭವಿಷ್ಯದಲ್ಲೂ ಸಂಭವಿಸುತ್ತದೆ. ಅದು ಕ್ರೀಡೆಯ ಭಾಗವಾಗಿದ್ದು, ಓರ್ವ ಆಟಗಾರನಾಗಿ ನಿಮ್ಮ ಆಟದತ್ತ ಗಮನ ಹರಿಸಬೇಕು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.