ADVERTISEMENT

‘ಲಾಕ್‌ಡೌನ್ ಆದೇಶವು ಮನುಕುಲದ ಜೀವಸೆಲೆ, ಭಾರತೀಯರ ಶಕ್ತಿ ಸಂಸ್ಕೃತಿಯಲ್ಲಿ ಅಡಗಿದೆ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 5:29 IST
Last Updated 27 ಮಾರ್ಚ್ 2020, 5:29 IST
   

ನವದೆಹಲಿ: ದೇಶದಾದ್ಯಂತ ಘೋಷಣೆಯಾಗಿರುವ ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಉಳಿದುಕೊಳ್ಳಬೇಕೆಂದು ಮನವಿ ಮಾಡಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌, ಇದು (ಲಾಕ್‌ಡೌನ್‌) ಮನುಕುಲದ ಜೀವಸೆಲೆ ಎಂದು ಸಂಬೋಧಿಸಿದ್ದಾರೆ.

‘ಎಲ್ಲರೂ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗಾಗಿ ಮನೆಯಲ್ಲೇ ಇರಿ. ಈ ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಧಿಕಾರಿಗಳಿಗೆ ಪ್ರತಿಯೊಬ್ಬರೂ ನೆರವಾಗಬೇಕು’ ಎಂದು ಕ್ರಿಡಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಲಾಕ್‌ಡೌನ್‌ ಅಥವಾ ಮನೆಯಲ್ಲಿಯೇ ಇರಬೇಕು ಎನ್ನುವುದನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ. ಈ ಸಂದರ್ಭವನ್ನು ನಿಮಗೆನೀವೇ ಸವಾಲಾಗಿ ಸ್ವೀಕರಿಸಿ. ನಿಮ್ಮ ಮನೆಯೊಳಗಿರುವ ಕುಟುಂಬವೇ ನಿಮ್ಮ ಜಗತ್ತು. ನಿಮ್ಮನ್ನು ರಂಜಿಸಲು ಪುಸ್ತಕಗಳು, ಟಿವಿ, ಸಂಗೀತ ಹಾಗೂ ಇನ್ನಿತರ ವಿಧಾನಗಳಿವೆ. ನಿಮ್ಮ ಕುಟುಂಬದವರೊಂದಿಗೆ ನೀವು ಹೊಂದಿರುವ ಸಂವಹನವೇ ನಿಮ್ಮನ್ನು ರಂಜಿಸುವ ಉತ್ತಮ ವಿಧಾನವಾಗಲಿದೆ’ ಎಂದೂ ಹೇಳಿದ್ದಾರೆ.

ADVERTISEMENT

ವಿಶ್ವಕ್ರಿಕೆಟ್‌ನ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಕಪಿಲ್‌, ತಾವು ಮನೆಯಲ್ಲಿ ಉಳಿದು ಸಮಯ ದೂಡುತ್ತಿರುವ ಬಗೆಯನ್ನೂ ವಿವರಿಸಿದ್ದಾರೆ.

‘ಮನೆ, ಹೂದೋಟವನ್ನು ಸ್ವಚ್ಚಗೊಳಿಸುವುದು ಹಾಗೂ ಅಡುಗೆ ಮಾಡುತ್ತೇನೆ. ಮನೆಯಲ್ಲಿರುವ ಸಣ್ಣ ತೋಟವೇ ನನ್ನ ಪಾಲಿನ ಗಾಲ್ಫ್‌ ಅಂಗಳವಾಗಿದೆ. ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದೇನೆ. ಕಳೆದು ಕೆಲವು ವರ್ಷಗಳಿಂದ ಅದನ್ನು ನಾನು ಮಿಸ್‌ ಮಾಡಿಕೊಂಡಿದ್ದೆ’ ಎಂದಿದ್ದಾರೆ.

ಇಂತಹ ಕಠಿಣ ಸಂದರ್ಭಗಳು ಹೆಚ್ಚೆಚ್ಚು ಪಾಠಗಳನ್ನು ಕಲಿಸುತ್ತವೆ. ಇದರಿಂದ ಹೆಚ್ಚೆಚ್ಚು ಜವಾಬ್ದಾರಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಈ ಹಿಂದೆ ಪ್ರತಿಯೊಂದು ಸಲ ಇಂತಹ ಸಂಕಷ್ಟಗಳು ಎದುರಾದಾಗಲೂ ಮನುಕುಲ ಹೇಗೆಲ್ಲ ಹೋರಾಡಿದೆ ಎಂಬುದನ್ನು ಓದಿ ಮತ್ತು ಕೇಳಿ ತಿಳಿದುಕೊಂಡಿದ್ದೇನೆ. ಭಾರತೀಯರ ಶಕ್ತಿ ನಮ್ಮ ಸಂಸ್ಕೃತಿಯಲ್ಲಿ ಅಡಗಿದೆ. ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತೇವೆ. ಹಿರಿಯರ ಕಾಳಜಿ ಮಾಡುತ್ತೇವೆ.ದೊಡ್ಡವರಿಗೆ ಸಹಾಯ ಮಾಡಲು ಮುಂದಾಗುತ್ತೇವೆ.’

‘ಎಲ್ಲರೂ ಒಂದಾಗಿ ಸರ್ಕಾರ ಮತ್ತು ವೈದ್ಯರ ಕೈ ಬಲಪಡಿಸುವ ಮೂಲಕ ನಾವು ಕೋವಿಡ್‌–19 ವಿರುದ್ಧದಯುದ್ಧವನ್ನು ಗೆದ್ದೇಗೆಲ್ಲುತ್ತೇವೆ ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.