
ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋತಿರುವ ಭಾರತ ತಂಡ ಬುಧವಾರ (ಅಕ್ಟೋಬರ್ 29) 5 ಪಂದ್ಯಗಳ ಟಿ20ಐ ಸರಣಿ ಮೊದಲ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ತಂಡದ ನಾಯಕ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಪರದಾಡುತ್ತಿರುವುದು ತಂಡದ ಚಿಂತೆಗೆ ಕಾರಣವಾಗಿದೆ.
ಚುಟುಕು ಮಾದರಿ ಕ್ರಿಕೆಟ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಕಳೆದ 10 ಟಿ20ಐ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಎಂಟರಲ್ಲಿ ಗೆಲುವು ಸಾಧಿಸಿದ್ದರೆ, ಒಂದೊಂದು ಪಂದ್ಯದಲ್ಲಿ ಸೋಲು ಅನುಭವಿಸಿವೆ. ಇನ್ನೊಂದು ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡರೆ, ಆಸೀಸ್ನ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಸೂರ್ಯಕುಮಾರ್ ಯಾದವ್ ಟಿ20ಐ ತಂಡದ ನಾಯಕಾರದ ಬಳಿಕ ಉತ್ತಮ ದಾಖಲೆ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಆಡಿರುವ 29 ಪಂದ್ಯಗಳಲ್ಲಿ 23ರಲ್ಲಿ ಗೆಲುವು ಸಾಧಿಸಿದೆ. ಮಾತ್ರವಲ್ಲ, ತಂಡದ ಎಲ್ಲಾ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಡುತ್ತಿದ್ದಾರೆ. ಆದರೆ, 2025ರಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟ್ನಿಂದ ಅಷ್ಟಾಗಿ ರನ್ ಬಾರದಿರುವುದು ಮ್ಯಾನೆಜ್ಮೆಂಟ್ ಚಿಂತೆಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಂಬರುವ ಟಿ20 ವಿಶ್ವಕಪ್ ಸಿದ್ದತೆಯ ಪ್ರಮುಖ ಘಟ್ಟವಾಗಲಿದೆ. ಇಲ್ಲಿಂದ ಮುಂದಿನ ವರ್ಷದ ಟಿ20ಐ ವಿಶ್ವಕಪ್ ವರೆಗೆ ಭಾರತ ತಂಡ 15 ಪಂದ್ಯಗಳನ್ನು ಆಡಲಿದೆ.
ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್ ಕುರಿತು ಮಾತನಾಡಿರುವ ತರಬೇತುದಾರ ಗಂಭೀರ್, ‘ಸೂರ್ಯ ಅವರ ಬ್ಯಾಟಿಂಗ್ ಲಯ ನನಗೇನೂ ಕಳವಳ ಮೂಡಿಸಿಲ್ಲ. ನಾವು ‘ಅಲ್ಟ್ರಾ ಅಗ್ರೆಸ್ಸಿವ್’ ಮಾದರಿಯಲ್ಲಿ ಆಡಲು ಬದ್ಧರಾಗಿದ್ದೇವೆ. ಇಂಥ ತತ್ವಕ್ಕೆ ಜೋತುಬಿದ್ದಾಗ ವೈಫಲ್ಯಗಳಾಗುವುದು ಸಹಜ’ ಎಂದಿದ್ದಾರೆ.
ಸೂರ್ಯಕುಮಾರ್, 2023ರಲ್ಲಿ ಆಡಿರುವ 18 ಇನಿಂಗ್ಸ್ಗಳಿಂದ 156ರ ಸ್ಟ್ರೈಕ್ ರೇಟ್ನಲ್ಲಿ 2 ಶತಕ ಹಾಗೂ 5 ಅರ್ಧಶತಕ ಸಹಿತ 733 ರನ್ ಗಳಿಸಿದ್ದರು. 2024 ರಲ್ಲಿ 151 ರ ಸ್ಟ್ರೈಕ್ ರೇಟ್ನಲ್ಲಿ 450 ಕ್ಕಿಂತ ಕಡಿಮೆ ರನ್ ಗಳಿಸಿದ್ದರು. ಆದರೆ 2025ರಲ್ಲಿ ಅವರು ಆಡಿರುವ 10 ಇನಿಂಗ್ಸ್ಗಳಿಂದ ಕೇವಲ 11ರ ಸರಾಸರಿಲ್ಲಿ 100 ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.