ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಎಲೀಟ್ ಅಂಪೈರ್ ಪ್ಯಾನಲ್ನಲ್ಲಿ ಭಾರತದಿಂದ ಒಬ್ಬರೂ ಇಲ್ಲ. ಒಬ್ಬ ವಿಶ್ವದರ್ಜೆಯ ಅಂಪೈರ್ ಭಾರತದಿಂದ ಬರಬೇಕು ಎಂದು ಆಸ್ಟ್ರೇಲಿಯಾದ ನಿವೃತ್ತ ಅಂಪೈರ್ ಸೈಮನ್ ಟಾಫೆಲ್ ಹೇಳಿದ್ದಾರೆ.
2015ರಿಂದ ಐಸಿಸಿ ಪ್ಯಾನಲ್ನಲ್ಲಿದ್ದ ಭಾರತದ ಎಸ್. ರವಿ ಅವರು ಈ ವರ್ಷ ಸ್ಥಾನ ಪಡೆದಿಲ್ಲ. ಅವರು 33 ಟೆಸ್ಟ್, 48 ಅಂತರರಾಷ್ಟ್ರೀಯ ಏಕದಿನ ಮತ್ತು 18 ಟ್ವೆಂಟಿ–20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು. ಆ್ಯಷಸ್ ಟೆಸ್ಟ್ ಸರಣಿಯಲ್ಲಿಯೂ ಅಂಪೈರಿಂಗ್ ಮಾಡಿದ್ದರು. ಎಸ್. ವೆಂಕಟರಾಘವನ್ ಅವರ ನಂತರ ಭಾರತದಿಂದ ಅಂಪೈರಿಂಗ್ ನಿರ್ವಹಿಸಿದ ಶ್ರೇಯ ರವಿಯವರದ್ದು.
‘ಭಾರತದಿಂದ ಒಬ್ಬ ವಿಶ್ವದರ್ಜೆ ಅಂಪೈರ್ ಸಿದ್ಧವಾಗಲು ಹತ್ತು ವರ್ಷಗಳಾದರೂ ಬೇಕು.2006ರಲ್ಲಿ ನಾವು ಅಂಪೈರ್ಗಳ ತರಬೇತಿ ಮತ್ತು ಆಯ್ಕೆ ಕಾರ್ಯಕ್ರಮವನ್ನು ಶುರುಮಾಡಿದಾಗ 2015ರಲ್ಲಿ ಎಸ್. ರವಿ ಸಿದ್ಧರಾಗಿದ್ದರು’ ಎಂದು ಸೈಮನ್ ನೆನಪಿಸಿಕೊಂಡರು.
‘ಬಿಸಿಸಿಐ ಈ ಕುರಿತು ಯೋಚನೆ ಮಾಡಬೇಕು. ಅಧ್ಯಕ್ಷ ಸೌರವ್ ಗಂಗೂಲಿ ಅಂಪೈರ್ಗಳ ಕೌಶಲ್ಯ ಸುಧಾರಣೆ ಮತ್ತು ಬೆಳವಣಿಗೆಗೆ ಸೂಕ್ತ ಯೋಜನೆ ರೂಪಿಸಬೇಕು. ದೇಶಿ ಕ್ರಿಕೆಟ್ ಸುಧಾರಣೆ ಕುರಿತು ಗಂಗೂಲಿ ಮಾತನಾಡಿದ್ದಾರೆ. ಅದರಲ್ಲಿ ಅಂಪೈರ್ಗಳ ಕುರಿತ ಯೋಜನೆಯೂ ಇರುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ಧಾರೆ.
‘ಅಂಪೈರಿಂಗ್ ವೃತ್ತಿ ಎಲ್ಲರಿಂದಲೂ ಸಾಧ್ಯವಿಲ್ಲ. ಅದೂ ಇಂದಿನ ದಿನಗಳಲ್ಲಿ ಬಹಳ ಕಠಿಣ ಸವಾಲಿನದ್ದಾಗಿದೆ.ಅದರಲ್ಲೂ ಇಂದಿನ ಆಧುನಿಕ ತಂತ್ರಜ್ಞಾನಗಳ ಬಳಕೆಯ ನಡುವೆ ಅಂಪೈರ್ ತಮ್ಮ ಚಾಣಾಕ್ಷತೆಯನ್ನು ಮೆರೆಯಬೇಕು. ಅವರ ಯಾವುದೇ ರೀತಿಯ ನಿರ್ಣಯಗಳು ಕ್ಷಣಮಾತ್ರದಲ್ಲಿ ಬಹಿರಂಗವಾಗುತ್ತವೆ. ತಪ್ಪು ಮಾಡಿದರೆ ಅವಮಾನ ಮತ್ತು ಉತ್ತಮ ತೀರ್ಪಿಗೆ ಗೌರವಗಳು ಕೂಡಲೇ ಲಭಿಸುತ್ತವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.