ADVERTISEMENT

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾಗಿದ್ದೇಕೆ? ಗಂಗೂಲಿ ಹೇಳಿದ್ದೇನು?

ಪಿಟಿಐ
Published 13 ಸೆಪ್ಟೆಂಬರ್ 2021, 7:35 IST
Last Updated 13 ಸೆಪ್ಟೆಂಬರ್ 2021, 7:35 IST
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ   

ಮ್ಯಾಂಚೆಸ್ಟರ್‌: ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕೋವಿಡ್ ಆತಂಕದಿಂದಾಗಿ ಟೀಮ್ ಇಂಡಿಯಾ ಆಟಗಾರರು ಆಡಲು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಪಂದ್ಯ ಆರಂಭಗೊಳ್ಳಲು ಎರಡು ತಾಸು ಮಾತ್ರ ಬಾಕಿಯಿದ್ದಾಗ ಪಂದ್ಯ ರದ್ದುಗೊಳಿಸಲು ತೀರ್ಮಾನಿಸಲಾಯಿತು.

'ಕೋವಿಡ್ ಆತಂಕದಲ್ಲಿ ಪಂದ್ಯವನ್ನು ಆಡಲು ಆಟಗಾರರು ನಿರಾಕರಿಸಿದರು. ಅದಕ್ಕಾಗಿ ನೀವು ಆಟಗಾರರನ್ನು ದೂಷಿಸುವಂತಿಲ್ಲ' ಎಂದು ದಿ ಟೆಲಿಗ್ರಾಫ್ ಪತ್ರಿಕೆಗೆ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

'ಸಹಾಯಕ ಫಿಸಿಯೊ ಯೋಗೇಶ್ ಪರ್ಮಾರ್ ಅವರಿಗೆಪಂದ್ಯ ಆರಂಭಕ್ಕೂ ಹಿಂದಿನ ದಿನ ಕೋವಿಡ್ ಸೋಂಕು ದೃಢಪಟ್ಟಿತ್ತು. ಅವರು ಬಹುತೇಕ ಎಲ್ಲ ಆಟಗಾರರ ಸಂಪರ್ಕದಲ್ಲಿದ್ದರು' ಎಂದು ಗಂಗೂಲಿ ವಿವರಿಸಿದರು.

'ಸಹಾಯಕ ಫಿಸಿಯೊಗೆ ಸೋಂಕು ತಗುಲಿದೆ ಎಂಬುದನ್ನು ಅರಿತುಕೊಂಡ ಆಟಗಾರರು ವಿಚಲಿತಗೊಂಡರು. ತಮಗೂ ಸೋಂಕು ತಗುಲಿರಬಹುದೇ ಎಂದು ಭೀತಿಗೊಳಗಾದರು' ಎಂದು ದಾದಾ ನುಡಿದರು.

ಐಪಿಎಲ್‌ಗಾಗಿ ಭಾರತವು ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ದಾದಾ, 'ಬಿಸಿಸಿಐ ಬೇಜವಾಬ್ದಾರಿಯುತ ಮಂಡಳಿಯಲ್ಲ. ನಾವು ಇತರ ಮಂಡಳಿಗಳಿಗೂ ಗೌರವ ಕೊಡುತ್ತೇವೆ. ಉಳಿದಿರುವ ಒಂದು ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಆಯೋಜಿಸಲು ಯೋಜನೆ ಇರಿಸಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.