ರಿಷಭ್ ಪಂತ್
ರಾಯಿಟರ್ಸ್ ಚಿತ್ರ
ನವದೆಹಲಿ: ಭಾರತವು ಹೆಚ್ಚು ಸಮಯದ ವರೆಗೆ ಬ್ಯಾಟಿಂಗ್ ಮಾಡುವತ್ತ ಗಮನ ಹರಿಸಬೇಕು ಮತ್ತು ವಿಕೆಟ್ಕೀಪರ್ – ಬ್ಯಾಟರ್ ರಿಷಭ್ ಪಂತ್ ಅವರು ಶತಕವನ್ನು ದ್ವಿಶತಕವಾಗಿ ಪರಿವರ್ತಿಸಬೇಕು ಎಂದು ಹಿರಿಯ ಕ್ರಿಕೆಟಿಗ ಆರ್. ಅಶ್ವಿನ್ ಹೇಳಿದ್ದಾರೆ.
ಇಂಗ್ಲೆಂಡ್ನ ಲೀಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಂಡದ ಪರ ಐದು ಶತಕಗಳು ದಾಖಲಾದರೂ, ಸೋಲು ಎದುರಾಗಿತ್ತು. ಇಂಗ್ಲೆಂಡ್ ತಂಡವು 371 ರನ್ಗಳ ಕಠಿಣ ಗುರಿ ಬೆನ್ನತ್ತಿ ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.
ಈ ಪಂದ್ಯದ ಫಲಿತಾಂಶದ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್ 'Ash Ki Baat'ನಲ್ಲಿ ಮಾತನಾಡಿರುವ ಅಶ್ವಿನ್, 'ಪ್ರತಿ ಇನಿಂಗ್ಸ್ನಲ್ಲಿ ಹೆಚ್ಚು ಸಮಯದ ವರೆಗೆ ಮುಂದುವರಿಸಬಹುದೇ ಎಂಬುದರ ಕಡೆಗೆ ಭಾರತದ ಬ್ಯಾಟಿಂಗ್ ವಿಭಾಗವು ಗಮನಹರಿಸಬೇಕು. ರನ್ ಗಳಿಸುವುದಷ್ಟೇ ಅಲ್ಲ. ಇಂಗ್ಲೆಂಡ್ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿರುವಂತೆ ಮಾಡಬೇಕು' ಎಂದಿದ್ದಾರೆ.
ಭಾರತ ತಂಡವು ನಾಲ್ಕನೇ ದಿನ ಬೇಗನೆ ಆಲೌಟ್ ಆದದ್ದು ಪಂದ್ಯ ಕೈಜಾರುವಂತೆ ಮಾಡಿತು ಎಂದಿರುವ ಅಶ್ವಿನ್, 'ಆತಂಕಪಡುವ ಅಗತ್ಯವಿಲ್ಲ. ಭಾರತವು ಮುಂದಿನ ಟೆಸ್ಟ್ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿಬಹುದು. ಆದರೆ, ಇಂಗ್ಲೆಂಡ್ ಅನುಸರಿಸುತ್ತಿರುವ ತಂತ್ರಗಳನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ, ಸರಣಿಯು ನಮ್ಮಿಂದ ತುಂಬಾ ದೂರ ಹೋಗುತ್ತದೆ' ಎಂದು ಪ್ರತಿಪಾದಿಸಿದ್ದಾರೆ.
'5ನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸದಿದ್ದಾಗಲೇ ಪಂದ್ಯ ಮುಗಿದಿತ್ತು. ಗುರಿ ಏನೇ ಆಗಿದ್ದರೂ ಬೆನ್ನತ್ತುವುದಾಗಿ ಈ ಇಂಗ್ಲೆಂಡ್ ತಂಡವು ಈಗಾಗಲೇ ಜಾಹೀರು ಮಾಡಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಕಡಿಮೆ ಸಮಯ ಸಿಗುವಂತೆ ಮಾಡಿ ಹೆಚ್ಚಿನ ಗುರಿ ನೀಡಬೇಕಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ನೀವು ಗುರಿ ನಿಗದಿಪಡಿಸಲು ಬಯಸುವುದಾದರೆ, ಕನಿಷ್ಠ 400–450 ರನ್ ನೀಡಬೇಕು. ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಲು 450 ರನ್ ಗುರಿ ನೀಡಿ ಎದುರಾಳಿಗೆ ಕಡಿಮೆ ಸಮಯ ಸಿಗುವಂತೆ ಮಾಡುವುದು ಉತ್ತಮ' ಎಂದಿದ್ದಾರೆ.
ಪಂತ್ ಅವರನ್ನು ಧೋನಿಗಲ್ಲ ಕೊಹ್ಲಿಗೆ ಹೋಲಿಸಿ
ಲೀಡ್ಸ್ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ ರಿಷಭ್ ಪಂತ್ ಅವರನ್ನು ವಿರಾಟ್ ಕೊಹ್ಲಿ ಅವರಿಗೆ ಹೋಲಿಸಿ. ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೋಲಿಸುವುದು ಸೂಕ್ತವಲ್ಲ. ಏಕೆಂದರೆ, ಧೋನಿ 5ನೇ ಕ್ರಮಾಂಕದಲ್ಲಿ ಎಂದೂ ಬ್ಯಾಟಿಂಗ್ ಮಾಡಿಲ್ಲ ಎಂದಿದ್ದಾರೆ ಅಶ್ವಿನ್.
'ರಿಷಭ್ ಅವರನ್ನು ವಿರಾಟ್ ಕೊಹ್ಲಿಯಂತಹ ಆಟಗಾರರಿಗೆ ಹೋಲಿಸಬೇಕು. ಆತ ಅಗ್ರ ಬ್ಯಾಟರ್' ಎಂದು ಹೇಳಿರುವ ಅಶ್ವಿನ್, ಚೆಂಡನ್ನು ಬಾರಿಸುವ ಪಂತ್ ಅವರ ಸಾಮರ್ಥ್ಯವನ್ನು ಪಾಕಿಸ್ತಾನದ ದಿಗ್ಗಜ ಇಂಜಮಾಮ್ ಉಲ್ ಹಕ್ ಅವರಿಗೆ ಹೋಲಿಸಿದ್ದಾರೆ.
ಕೆಲವು ವಿಶೇಷ ಆಟಗಾರರು ಚೆಂಡನ್ನು ಬೇಗನೆ ಆಯ್ಕೆ ಮಾಡಿಕೊಳ್ಳುವುದು. ಎಲ್ಲಿಗೆ ಬಾರಿಸಬೇಕು ಎಂಬುದನ್ನು ತಕ್ಷಣವೇ ಅರ್ಥ ಮಾಡಿಕೊಳ್ಳುತ್ತಾರೆ. ರಿಷಭ್ ಕೂಡ ಅಂತಹ ಆಟಗಾರ ಎಂದು ಹೇಳಿದ್ದಾರೆ.
ಪಂತ್ ಅವರ ಅವಳಿ ಶತಕಗಳನ್ನು ಶ್ಲಾಘಿಸಿರುವ ಹಿರಿಯ ಆಟಗಾರ, ಇನಿಂಗ್ಸ್ ಅನ್ನು ದೀರ್ಘ ಸಮಯದವರೆಗೆ ಮುಂದುವರಿಸುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ.
'ಕೆಳಕ್ರಮಾಂಕದ ಬ್ಯಾಟರ್ಗಳು ಹೆಚ್ಚಿನ ಕಾಣಿಕೆ ನೀಡುವುದಿಲ್ಲ ಎಂಬುದು ತಿಳಿದಿರುವ ಕಾರಣ ಮುಂದಿನ ಬಾರಿ ನೀವು 130 ರನ್ ಗಳಿಸಿದರೆ ದ್ವಿಶತಕ ಬಾರಿಸಿ. ಕೊನೇ ದಿನವರೆಗೆ ತಂಡವನ್ನು ಮುನ್ನಡೆಸುವಂತೆ ಮನನಿ ಮಾಡುತ್ತೇನೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.