
ಫೋಟೊ ಕೃಪೆ: ಪಿಟಿಐ
ನವದೆಹಲಿ: ದುಬೈನಲ್ಲಿ ಈಚೆಗೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಪುರುಷರ ತಂಡದ ಆಟಗಾರರು ಪಾಕಿಸ್ತಾನ ಆಟಗಾರರ ಹಸ್ತಲಾಘವ ಮಾಡಿರಲಿಲ್ಲ. ಇದೇ ನೀತಿಯನ್ನು ಭಾರತ ಮಹಿಳಾ ಕ್ರಿಕೆಟ್ ತಂಡವೂ ವಿಶ್ವಕಪ್ ಟೂರ್ನಿಯಲ್ಲಿ ಅನುಸರಿಸಲು ನಿರ್ಧರಿಸಿದೆ.
ಅಕ್ಟೋಬರ್ 5ರಂದು ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಕೊಲಂಬೊದಲ್ಲಿ ನಡೆಯಲಿರುವ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅದರಲ್ಲಿ ಪಾಕ್ ಆಟಗಾರ್ತಿಯರ ಕೈಕುಲುಕದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
‘ಸರ್ಕಾರದ ನೀತಿಯೊಂದಿಗೆ ಬಿಸಿಸಿಐ ಸಹಮತ ಹೊಂದಿದೆ. ಪಂದ್ಯದ ಟಾಸ್ ಸಂದರ್ಭದಲ್ಲಿ ನಾಯಕಿಯು ಪಾಕ್ ನಾಯಕಿಯ ಕೈಕುಲುಕುವುದಿಲ್ಲ, ಮ್ಯಾಚ್ ರೆಫರಿಯೊಂದಿಗೆ ಫೋಟೋ ಶೂಟ್ ಇಲ್ಲ ಮತ್ತು ಪಂದ್ಯ ಮುಕ್ತಾಯದ ನಂತರವೂ ಪಾಕ್ ಆಟಗಾರ್ತಿಯರ ಕೈಕುಲುಕುವುದಿಲ್ಲ. ಪುರುಷರ ತಂಡವು ಪಾಲಿಸಿದ ನೀತಿಯನ್ನು ಮಹಿಳಾ ತಂಡವೂ ಅನುಸರಿಸಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2022ರಲ್ಲಿ ನ್ಯೂಜಿಲೆಂಡ್ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆದಿತ್ತು. ಆಗ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್ ಅವರ ಹೆಣ್ಣುಮಗುವನ್ನು ಭಾರತದ ಆಟಗಾರ್ತಿಯರು ಎತ್ತಿ ಆಡಿಸಿದ್ದ ಚಿತ್ರಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದವು.
ಆದರೆ ಈ ಬಾರಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಪಾಕ್ ನಾಯಕಿ ಫಾತಿಮಾ ಸನಾ ಅವರು ಪರಸ್ಪರ ಶುಭಾಶಯಗಳನ್ನೂ ಕೋರದಿರುವ ಪರಿಸ್ಥಿತಿ ಇದೆ.
ದುಬೈನಲ್ಲಿ ಏಷ್ಯಾ ಕಪ್ ಗೆದ್ದ ಭಾರತ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರೂ ಆಗಿರುವ ಪಾಕಿಸ್ತಾನದ ಸಚಿವ ಮೊಹಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದು ವಿವಾದಕ್ಕೆ ತಿರುಗಿತ್ತು. ಈ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ.
ಭಾರತಕ್ಕೆ ಏಷ್ಯಾಕಪ್ ಹಸ್ತಾಂತರಿಸಲು ಸಿದ್ಧ: ನಕ್ವಿ
ಇಸ್ಲಾಮಾಬಾದ್ : ‘ಭಾರತ ತಂಡವು ಏಷ್ಯಾ ಕಪ್ ಟೂರ್ನಿಯಲ್ಲಿ ಜಯಿಸಿರುವ ಟ್ರೋಫಿಯನ್ನು ದುಬೈನಲ್ಲಿರುವ ಎಸಿಸಿ ಕಚೇರಿಯಿಂದ ತೆಗೆದುಕೊಳ್ಳಲು ಸ್ವಾಗತಿಸುತ್ತೇನೆ. ನಾನು ಅವರಿಗೆ ಟ್ರೋಫಿ ಹಸ್ತಾಂತರಿಸಲು ಸಿದ್ಧ’ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹಸಿನ್ ನಕ್ವಿ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರೂ ಆಗಿರುವ ನಕ್ವಿ ಅವರು ‘ಎಕ್ಸ್‘ನಲ್ಲಿ ಸಂದೇಶ ಹಾಕಿದ್ದಾರೆ. ‘ಎಸಿಸಿ ಅಧ್ಯಕ್ಷನಾಗಿ ನಾನು ಟ್ರೋಫಿಯನ್ನು ಭಾರತ ತಂಡಕ್ಕೆ ಹಸ್ತಾಂತರಿಸಲು ಈಗಲೂ ಸಿದ್ಧ. ಅವರಿಗೆ ನಿಜಕ್ಕೂ ಟ್ರೋಫಿ ಪಡೆಯುವ ಆಸೆ ಇದ್ದರೆ ದುಬೈನಲ್ಲಿರುವ ಎಸಿಸಿ ಕಚೇರಿಗೆ ಬಂದು ಟ್ರೋಫಿ ಪಡೆಯಲಿ. ಅವರನ್ನು ನಾನು ಸ್ವಾಗತಿಸುವೆ’ ಎಂದು ಉಲ್ಲೇಖಿಸಿದ್ದಾರೆ ಹೋದ ಭಾನುವಾರ ದುಬೈನಲ್ಲಿ ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಜಯಿಸಿತ್ತು. ಪಾಕಿಸ್ತಾನದ ಸಚಿವರೂ ಆಗಿರುವ ಮೊಹಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಸೂರ್ಯಕುಮಾರ್ ಯಾದವ್ ಬಳಗವು ನಿರಾಕರಿಸಿತ್ತು. ಪೆಹಲ್ಗಾಂ ಭಯೋತ್ಪಾದನಾ ದಾಳಿಯ ಪ್ರತಿಕಾರವಾಗಿ ಭಾರತದ ಸೇನೆಯು ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.