ADVERTISEMENT

IND vs SA 4th T20I: ಜಯಿಸುವ ಒತ್ತಡದಲ್ಲಿ ಪಂತ್‌ ಬಳಗ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 19:45 IST
Last Updated 16 ಜೂನ್ 2022, 19:45 IST
ಅಭ್ಯಾಸನಿರತ ಭಾರತ ತಂಡದ ಅಟಗಾರರು
ಅಭ್ಯಾಸನಿರತ ಭಾರತ ತಂಡದ ಅಟಗಾರರು    

ರಾಜ್‌ಕೋಟ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಕ್ರಿಕೆಟ್ ಸರಣಿ ಈಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ.ಶುಕ್ರವಾರ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯವು ಆತಿಥೇಯ ಭಾರತಕ್ಕೆ ಕಠಿಣ ಸವಾಲಾಗಿದೆ.

ತಂಡಕ್ಕೆ ಸರಣಿ ಜಯದ ಕನಸು ಜೀವಂತವಾಗುಳಿಯಬೇಕಾದರೆ, ರಿಷಭ್ ಪಂತ್ ಬಳಗವು ಇಲ್ಲಿ ಜಯಿಸಲೇಬೇಕಿದೆ. ಆದರೆ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು ಮೂರನೇ ಪಂದ್ಯದಲ್ಲಿ ಸೋತಿತ್ತು. ಭಾರತವು ಇಲ್ಲಿ ಜಯಿಸಿ ಸರಣಿಯಲ್ಲಿ ಸಮಬಲ ಸಾಧಿಸಿದರೆ, ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಕೊನೆಯ ಪಂದ್ಯವು ಕುತೂಹಲದ ಕಣಜವಾಗುವುದು ಖಚಿತ. ಆದರೂ 2–1ರಿಂದ ಮುಂದಿರುವ ತೆಂಬಾ ಬವುಮಾ ಬಳಗವೂ ರಾಜ್‌ಕೋಟ್‌ನಲ್ಲಿಯೇ ಜಯಿಸಿ ಸರಣಿ ಕಿರೀಟ ಧರಿಸುವ ವಿಶ್ವಾಸದಲ್ಲಿದೆ.

ವಿಶಾಖಪಟ್ಟಣದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಆಲ್‌ರೌಂಡ್ ಸಾಮರ್ಥ್ಯ ಮೆರೆದಿತ್ತು. ಆರಂಭಿಕ ಜೋಡಿ ಋತುರಾಜ್ ಗಾಯಕವಾಡ ಮತ್ತು ಇಶಾನ್ ಕಿಶನ್ ಅವರು ತಲಾ ಒಂದು ಅರ್ಧಶತಕ ಹೊಡೆದು ಉತ್ತಮ ಅಡಿಪಾಯ ಹಾಕಿದ್ದರು. ಮಧ್ಯಮವೇಗಿ ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಬ್ಬರೂ ಚಾಣಾಕ್ಷ ಬೌಲಿಂಗ್‌ನಿಂದ ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.

ADVERTISEMENT

ಆದರೆ, ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಸಾಧನೆ ಮೂಡಿಬಂದಿಲ್ಲ. ಆರಂಭಿಕ ಜೋಡಿ ವೈಫಲ್ಯ ಅನುಭವಿಸಿದರೆ, ಹೋರಾಟದ ಮೊತ್ತ ಕಲೆಹಾಕಲು ನಾಯಕ ಪಂತ್ ಸಹಿತ ಉಳಿದ ಬ್ಯಾಟರ್‌ಗಳು ಮಿಂಚುವ ಅಗತ್ಯವಿದೆ. ಅದರಲ್ಲೂ ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ ಹೆಚ್ಚು ರನ್‌ ಗಳಿಸುವ ಅಗತ್ಯವಿದೆ.

ದಕ್ಷಿಣ ಆಫ್ರಿಕಾ ಬೌಲಿಂಗ್ ಪಡೆಯೂ ಉತ್ತಮವಾಗಿವೆ. ಕಗಿಸೊ ರಬಾಡ, ತಬ್ರೇಜ್ ಶಂಸಿ, ಕೇಶವ ಮಹಾರಾಜ್ ಮತ್ತು ಎನ್ರಿಚ್ ನಾಕಿಯಾಅವರು ಉತ್ತಮ ಲಯದಲ್ಲಿದ್ದಾರೆ. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರಸಿ ವ್ಯಾನ್ ಡರ್ ಡಸೆಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ರಾಜ್‌ಕೋಟ್‌ನಲ್ಲಿ ಮುಸ್ಸಂಜೆ ವಾತಾವರಣದಲ್ಲಿ ತೇವಾಂಶ ತುಸು ಹೆಚ್ಚಿರುವ ಕಾರಣ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಣಯವೂ ಮುಖ್ಯವಾಗಲಿದೆ. ಬಹುತೇಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ತಂತ್ರ ಅನುಸರಿಸುವ ಸಾಧ್ಯತೆಯೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.