ADVERTISEMENT

ಶಿಖರ್ ಬಳಗಕ್ಕೆ ಮುಂಬೈನಲ್ಲಿ ಕ್ವಾರಂಟೈನ್

ಶ್ರೀಲಂಕಾದಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲಿರುವ ಭಾರತ ತಂಡ

ಪಿಟಿಐ
Published 12 ಜೂನ್ 2021, 14:46 IST
Last Updated 12 ಜೂನ್ 2021, 14:46 IST
ಶಿಖರ್ ಧವನ್
ಶಿಖರ್ ಧವನ್   

ನವದೆಹಲಿ: ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಲು ಶ್ರೀಲಂಕಾಕ್ಕೆ ತೆರಳುವ ಶಿಖರ್ ಧವನ್ ನಾಯಕತ್ವ ಕ್ರಿಕೆಟ್ ತಂಡವು ಸೋಮವಾರದಿಂದ ಮುಂಬೈನಲ್ಲಿ ಕ್ವಾರಂಟೈನ್‌ಗೊಳಗಾಗಲಿದೆ.

ಆಟಗಾರರು ಮುಂಬೈನ ಹೋಟೆಲ್‌ನಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಸ ಮಾಡಲಿದ್ದಾರೆ. ಈ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಆರು ಬಾರಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು.

‘ಮೊದಲ ಏಳು ದಿನ ಆಟಗಾರರು ಹೋಟೆಲ್ ಕೋಣೆಗಳಲ್ಲಿಯೇ ಉಳಿಯಲಿದ್ದಾರೆ. ಬಯೋಬಬಲ್‌ ನಿಯಮದ ಪ್ರಕಾರ ನಿಗದಿಪಡಿಸಲಾದ ವಿಶಾಲವಾದ ಕೋಣೆಯಲ್ಲಿ ಎಲ್ಲರಿಗೂ ಭೇಟಿಯಾಗುವ ಅವಕಾಶ ಇದೆ. ಜಿಮ್ನಾಷಿಯಂ ಬಳಸಲು ಪ್ರತಿಯೊಬ್ಬರಿಗೂ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ‘ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.

ADVERTISEMENT

‘ಇಂಗ್ಲೆಂಡ್‌ನಲ್ಲಿ ಪಾಲಿಸಲಾಗುತ್ತಿರುವ ನಿಯಮಗಳು ಇಲ್ಲಿಯೂ ಅನ್ವಯವಾಗುತ್ತವೆ. ಕೆಲವು ಆಟಗಾರರು ಬೇರೆ ನಗರಗಳಿಂದ ಮುಂಬೈಗೆ ವಿಶೇಷ ವಿಮಾನದಲ್ಲಿ ಬರಲಿದ್ದಾರೆ. ಇನ್ನೂ ಕೆಲವರು ಪ್ರಯಾಣಿಕ ವಿಮಾನಗಳಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿ ಮುಂಬೈ ತಲುಪಲಿರುವರು‘ ಎಂದು ಮೂಲಗಳು ತಿಳಿಸಿವೆ.

ಜುಲೈ 13ರಂದು ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ20 ಸರಣಿಗಳು ನಡೆಯಲಿವೆ.

‘ಇಲ್ಲಿ ಕ್ವಾರಂಟೈನ್ ಮುಗಿದ ನಂತರ ತಂಡವು ಶ್ರೀಲಂಕೆಗೆ ತೆರಳುವುದು. ಅಲ್ಲಿಯೂ ಮೊದಲ ಮೂರು ದಿನ ಕಡ್ಡಾಯ ಕ್ವಾರಂಟೈನ್ ಆಗಲಿದೆ. ನಂತರ ಸರಣಿಗೂ ಮುನ್ನ ಅಭ್ಯಾಸಗಳನ್ನು ಮಾಡಲು ಅವಕಾಶವಿದೆ‘ ಎಂದೂ ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.