ನವದೆಹಲಿ:ಕೋಲ್ಕತ್ತ ನೈಟ್ರೈಡರ್ಸ್ (ಕೆಕೆಆರ್) ತಂಡವು ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಆರಂಭ ಮಾಡದಿದ್ದರೆ, ನಾಯಕತ್ವ ಬದಲಾವಣೆ ಆಗಬಹುದು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸುಳಿವು ನೀಡಿದ್ದಾರೆ.
‘ಕೆಕೆಆರ್ ಆಕರ್ಷಕ ತಂಡವಾಗಿದ್ದು, ಆಕ್ರಮಣಕಾರಿ ಬ್ಯಾಟ್ಸ್ಮನ್ಗಳನ್ನು ಒಳಗೊಂಡಿದೆ. ಮಧ್ಯಮ ಕ್ರಮಾಂಕಕ್ಕೆ ಮಾರ್ಗನ್ ಸೇರ್ಪಡೆಯಾಗಿರುವುದರಿಂದ ಸ್ಥಿರತೆ ಮತ್ತು ಅನುಭವವೂ ಬಂದಂತಾಗಿದೆ. ಹೀಗಾಗಿ ಅವರು ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾಯಕತ್ವದ ಬಗ್ಗೆ ಮಾತನಾಡಿರುವ ಅವರು, ತಂಡದ ಪ್ರದರ್ಶನದ ಆಧಾರದ ಮೇಲೆ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
‘ಒಂದು ವೇಳೆ ಮೊದಲ ನಾಲ್ಕು–ಐದು ಪಂದ್ಯಗಳಲ್ಲಿ ಕೆಕೆಆರ್ ಒಳ್ಳೆಯ ಆರಂಭ ಮಾಡದಿದ್ದರೆ, ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ನಾಯಕತ್ವ ವಹಿಸಿಕೊಳ್ಳಬಹುದು. ಏಕೆಂದರೆ ಅವರಲ್ಲಿ ಆ ಸಾಮರ್ಥ್ಯವಿದೆ’ ಎಂದಿದ್ದಾರೆ. ಮುಂದುವರಿದು,ಈ ಬಾರಿ ಹರಾಜಿನಲ್ಲಿ ₹ 15.5 ಕೋಟಿ ನೀಡಿ ಖರೀದಿಸಿರುವ ಪ್ಯಾಟ್ ಕಮಿನ್ಸ್ ಅವರ ಮೇಲೆ ಸಾಕಷ್ಟು ಒತ್ತಡ ಇರಲಿದೆ ಎಂದು ಹೇಳಿದ್ದಾರೆ.
‘ಟಿ20 ಕ್ರಿಕೆಟ್ ಪ್ರಬಲ ಆಟಗಾರ ಆಂಡ್ರೆ ರಸೆಲ್ ಕೆಕೆಆರ್ನಲ್ಲಿದ್ದಾರೆ. ಆದರೆ, ದುಬಾರಿ ಆಟಗಾರ ಪ್ಯಾಟ್ ಕಮಿನ್ಸ್ ಅವರೂ ತಂಡದಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಅವರ (ಕಮಿನ್ಸ್) ಪ್ರದರ್ಶನ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಹಾಗಾಗಿ ಅವರ ಮೇಲೆ ಒಂದು ರೀತಿಯ ಒತ್ತಡ ಇರಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಯಾವಾಗ ನೀವು ದುಬಾರಿ ಆಟಗಾರರಾಗಿರುತ್ತೀರೋ, ಆಗ ಅಷ್ಟು ದೊಡ್ಡ ಮೊತ್ತದ ದರ ಪಟ್ಟಿಯೂ ಜೊತೆಗಿರುತ್ತದೆ. ಅವರು ಎಲ್ಲ ಪಂದ್ಯಗಳನ್ನೂ ಆಡುವರೇ? ಎಂಬುದನ್ನೂ ನಾವು ಅವಲೋಕಿಸಬೇಕು’ ಎಂದು ಹೇಳಿದ್ದಾರೆ.
2019ರ ಏಕದಿನ ವಿಶ್ವಕಪ್ನಲ್ಲಿಮಾರ್ಗನ್ ನಾಯಕತ್ವದಲ್ಲಿ ಆಡಿದ್ದ ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.