ದುಬೈ: ಐಪಿಎಲ್ನಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿತ್ತು. ಡೆಲ್ಲಿ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 'ಮೈಂಡ್ ಗೇಮ್'ಗೆ ಚೆನ್ನೈ ಬ್ಯಾಟ್ಸ್ಮನ್ ಋತುರಾಜ್ ಗಾಯಕವಾಡ್ ಅದೇ ಧಾಟಿಯಲ್ಲಿ ಉತ್ತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಐದು ವಿಕೆಟ್ ನಷ್ಟಕ್ಕೆ 172 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಗಾಯಕವಾಡ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಜೊತೆಯಾಟ ಕಟ್ಟಿದ್ದರು.
ಇದನ್ನೂ ಓದಿ:IPL 2021: ಡೆಲ್ಲಿ ವಿರುದ್ಧ ಗೆದ್ದ ಬಳಿಕ ಚೆನ್ನೈ ನಾಯಕ ಧೋನಿ ಮಾಡಿದ್ದೇನು?
ಈ ಸಂದರ್ಭದಲ್ಲಿ ಬೌಲಿಂಗ್ ಮಾಡಲು ಬಂದ ಅಶ್ವಿನ್, ಸ್ಟ್ರೈಕ್ನಲ್ಲಿದ್ದ ಋತುರಾಜ್ ಏಕಾಗ್ರತೆಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದರು. ಚೆನ್ನೈ ಇನ್ನಿಂಗ್ಸ್ನ 9ನೇ ಓವರ್ನ ನಾಲ್ಕನೇ ಬಾಲ್ ಎಸೆಯಲು ಬಂದ ಅಶ್ವಿನ್, ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದರು. ಚೆಂಡನ್ನು ಎಸೆಯದೆ ಹಿಂತಿರುಗಿದರು.
ಇದರಿಂದ ವಿಚಲಿತರಾಗದ ಗಾಯಕವಾಡ್ ಬಳಿಕ ಅಶ್ವಿನ್ ಬೌಲಿಂಗ್ ಮುಂದುವರಿಸಿದಾಗ ಸ್ವತಃ ತಾವೇ ಕ್ರೀಸಿನಿಂದ ಆಚೆಗೆ ಸರಿಯುವ ಮೂಲಕ ತಕ್ಕ ಉತ್ತರ ನೀಡಿದರು.
ಅಶ್ವಿನ್ ವರ್ತನೆಗೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಷ್ಟೇ ಕೆಕೆಆರ್ ನಾಯಕ ಏಯಾನ್ ಮಾರ್ಗನ್ ಜೊತೆಗೂ ವಿವಾದಕ್ಕೊಳಗಾಗಿದ್ದರು.
ಅತ್ತ ಅಮೋಘ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್ 70 ರನ್ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ 600 ರನ್ಗಳ ಮೈಲಿಗಲ್ಲು ತಲುಪಿದರು.
ಈ ಹಿಂದೆ ಕೀರನ್ ಪೊಲಾರ್ಡ್ಗೆಮಹೇಂದ್ರ ಸಿಂಗ್ ಧೋನಿ ಇದೇ ರೀತಿಯಲ್ಲಿ ಉತ್ತರಿಸಿದ್ದರು. ಈ ವಿಡಿಯೊವನ್ನು ಅಭಿಮಾನಿಯೊಬ್ಬರು ಹಂಚಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.