ನವದೆಹಲಿ: ಐಪಿಎಲ್ ಫ್ರಾಂಚೈಸ್ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ಯಾಟ್ ಕಮಿನ್ಸ್ ಅವರು ಕೋವಿಡ್ ವಿರುದ್ಧದ ಹೋರಾಟಕ್ಕೆ ಪಿಎಂ ಕೇರ್ಸ್ ನಿಧಿಗೆ ₹ 37 ಲಕ್ಷ ದೇಣಿಗೆ ನೀಡಿದ್ದಾರೆ. ಕೋವಿಡ್ ರೋಗಿಗಳಿಗೆ ಆಮ್ಲಜನಕ ಒದಗಿಸಲು ಅವರು ಈ ನೆರವು ನೀಡಿದ್ದಾರೆ. ಬಿಕ್ಕಟ್ಟಿನ ದಿನಗಳಲ್ಲಿ, ಕೆಲವು ಗಂಟೆಗಳ ಮನರಂಜನೆ ಒದಗಿಸುವ ಐಪಿಎಲ್ ಟೂರ್ನಿ ಮುಂದುವರಿಯಲಿ ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ಕಮಿನ್ಸ್ ‘ ಆಟಗಾರರಾಗಿ ನಾವು ಲಕ್ಷಾಂತರ ಜನರನ್ನು ತಲುಪಲು ಅನುವು ಮಾಡಿಕೊಡುವ ವೇದಿಕೆಯನ್ನು ಹೊಂದಿದ್ದೇವೆ. ಅದನ್ನು ಒಳ್ಳೆಯದಕ್ಕಾಗಿ ಬಳಸಿಕೊಳ್ಳಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದೇನೆ‘ ಎಂದಿದ್ದಾರೆ.
‘ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಐಪಿಎಲ್ ಟೂರ್ನಿ ನಡೆಸುವುದು ಸೂಕ್ತವೇ ಎಂಬ ಚರ್ಚೆಗಳು ನಡೆದಿವೆ. ಆದರೆ ಲಾಕ್ಡೌನಂತಹ ಕಷ್ಟದ ಸಂದರ್ಭದಲ್ಲಿ ಪ್ರತಿದಿನ ಕೆಲವು ಗಂಟೆಗಳ ಸಂತೋಷವನ್ನು ಐಪಿಎಲ್ ನೀಡುತ್ತದೆ ಎಂಬ ದೃಷ್ಟಿಕೋನವನ್ನು ಭಾರತ ಸರ್ಕಾರ ಹೊಂದಿದೆ‘ ಎಂದು ಕಮಿನ್ಸ್ ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್ ರದ್ದುಗೊಳಿಸಿ; ಆ ದುಡ್ಡು ಆಮ್ಲಜನಕ ಸಿಲಿಂಡರ್ ಖರೀದಿಸಲು ನೀಡಿ: ಅಖ್ತರ್
ಈ ಸಂಕಷ್ಟದ ಸಯಮದಲ್ಲಿ ಮಾನವೀಯತೆ ಮೆರೆದ ಪ್ಯಾಟ್ ಕಮಿನ್ಸ್ ಅವರು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಏತನ್ಮಧ್ಯೆ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ವೈಯಕ್ತಿಕ ಕಾರಣಗಳನ್ನು ನೀಡಿರುವ ಆಸ್ಟ್ರೇಲಿಯಾದ ಮೂವರು ಆಟಗಾರರು ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಆರ್ಸಿಬಿಯ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಜಂಪಾ ಮತ್ತು ರಾಜಸ್ಥಾನ ತಂಡದ ಆಂಡ್ರ್ಯ ಟೈ, ತವರಿಗೆ ಹಿಂತಿರುಗಲು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.