ADVERTISEMENT

19ನೇ ಓವರ್ ವಿಕೆಟ್ ಮೇಡನ್; ರಾಜಸ್ಥಾನ್ ಗೆಲುವಿನಲ್ಲಿ ಕನ್ನಡಿಗರ ಮಿಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2022, 11:19 IST
Last Updated 23 ಏಪ್ರಿಲ್ 2022, 11:19 IST
ಚಿತ್ರ ಕೃಪೆ: Twitter/@IPL
ಚಿತ್ರ ಕೃಪೆ: Twitter/@IPL   

ಮುಂಬೈ: ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ಸಿನಲ್ಲಿ ಕರ್ನಾಟಕದ ಆಟಗಾರರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದಗೆಲುವಿನಲ್ಲಿ ಕನ್ನಡಿಗರಾದ ದೇವದತ್ತ ಪಡಿಕ್ಕಲ್ ಹಾಗೂ ಪ್ರಸಿದ್ಧ ಕೃಷ್ಣ ಕಾಣಿಕೆ ನೀಡಿದ್ದಾರೆ.

ಮೊದಲು ಜೋಸ್ ಬಟ್ಲರ್ ಜೊತೆಗೆ ಮೊದಲ ವಿಕೆಟ್‌ಗೆ 91 ಎಸೆತಗಳಲ್ಲಿ 155 ರನ್‌ಗಳ ಜೊತೆಯಾಟದಲ್ಲಿ ಪಡಿಕ್ಕಲ್ ಭಾಗಿಯಾದರು. 35 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಆಕರ್ಷಕ ಅರ್ಧಶತಕ (54) ಗಳಿಸಿದರು. ಪಡಿಕ್ಕಲ್ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು.

ಬಳಿಕ ನಿರ್ಣಾಯಕ ಹಂತದಲ್ಲಿ ಪ್ರಸಿದ್ಧ ಕೃಷ್ಣ ದಾಳಿಯಲ್ಲಿ ಡೆಲ್ಲಿ ನಾಯಕ ರಿಷಭ್ ಪಂತ್ ಅವರ ಕ್ಯಾಚ್ ಹಿಡಿಯುವ ಮೂಲಕ ಪಡಿಕ್ಕಲ್ ಗಮನ ಸೆಳೆದರು. ಪರಿಣಾಮ 24 ಎಸೆತಗಳಲ್ಲಿ 44 ರನ್ ಗಳಿಸಿದ ಪಂತ್, ಪೆವಿಲಿಯನ್‌ಗೆ ಮರಳಿದರು.

19ನೇ ಓವರ್ ವಿಕೆಟ್ ಮೇಡನ್...
ಡೆಲ್ಲಿ ಗೆಲುವಿಗೆ ಅಂತಿಮ ಎರಡು ಓವರ್‌ನಲ್ಲಿ 36 ರನ್‌ ಬೇಕಾಗಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ಪ್ರಸಿದ್ದ ಕೃಷ್ಣ, 19ನೇ ಓವರ್‌ ಮೇಡನ್ ಎಸೆಯುವ ಮೂಲಕ ಒಂದು ವಿಕೆಟ್ ಗಳಿಸಿ ಪಂದ್ಯದ ಗತಿಯನ್ನು ಬದಲಿಸಿದರು.

ಅತ್ಯುತ್ತಮವಾಗಿ ಆಡುತ್ತಿದ್ದ ಲಲಿತ್ ಯಾದವ್‌ರನ್ನು ಪ್ರಸಿದ್ಧ ಔಟ್ ಮಾಡಿದರು. ಇದರಿಂದಾಗಿ ಡೆಲ್ಲಿ ಗೆಲುವಿಗೆ ಕೊನೆಯ ಓವರ್‌ನಲ್ಲಿ 36 ರನ್‌ಗಳ ಅಸಾಧ್ಯ ಗುರಿ ಪಡೆದಿತ್ತು.

ಅಂತಿಮವಾಗಿ ರಾಜಸ್ಥಾನ್ 15 ರನ್ ಅಂತರದ ಗೆಲುವು ದಾಖಲಿಸಿತ್ತು. ನಾಲ್ಕು ಓವರ್‌ಗಳಲ್ಲಿ 22 ರನ್ ಮಾತ್ರ ಬಿಟ್ಟುಕೊಟ್ಟಿದ್ದ ಪ್ರಸಿದ್ಧ, ಮೂರು ವಿಕೆಟ್ ಕಬಳಿಸಿ ಮಿಂಚಿದರು. ಈ ಮೊದಲು ಡೇವಿಡ್ ವಾರ್ನರ್ ಅವರಿಗೂ ಪ್ರಸಿದ್ಧ ಪೆವಿಲಿಯನ್ ಹಾದಿ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.