ADVERTISEMENT

IPL 2022: ಧೋನಿ ಚೆನ್ನೈ ತಂಡದ ನಾಯಕತ್ವ ತ್ಯಜಿಸಲು ಕಾರಣ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2022, 11:01 IST
Last Updated 24 ಮಾರ್ಚ್ 2022, 11:01 IST
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕತ್ವವನ್ನು ವರ್ಗಾಯಿಸಿರುವ ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವ ತ್ಯಜಿಸಿದಾಗಲೂ ಧೋನಿ ದಿಢೀರ್ ನಿರ್ಧಾರ ಕೈಗೊಂಡಿದ್ದರು.

ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೆ ನಾಯಕತ್ವವನ್ನು ಧೋನಿ ಹಸ್ತಾಂತರಿಸಿದ್ದಾರೆ. ಅಲ್ಲದೆ ಓರ್ವ ಆಟಗಾರನಾಗಿ ಮುಂದುವರಿಯಲಿದ್ದಾರೆ.

ಧೋನಿ ನಡೆ ಹಿಂದಿನ ಕಾರಣವೇನು ?
ಹಾಲಿ ಚಾಂಪಿಯನ್ ಚೆನ್ನೈ ತಂಡದ ನಾಯಕತ್ವವನ್ನು ಧೋನಿ ತ್ಯಜಿಸಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರಬಹುದು. ಆದರೆ ಈ ಕುರಿತು 'ಇಎಸ್‌ಪಿಎನ್ ಕ್ರಿಕ್‌ಇನ್ಫೋ'ಗೆ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯೆ ನೀಡಿದ್ದಾರೆ.

ನಾಯಕತ್ವ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿರಬೇಕು ಎಂದು ಧೋನಿ ಬಯಸಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ರವೀಂದ್ರ ಜಡೇಜ ಅವರಿಗೆ ಕಪ್ತಾನಗಿರಿ ವರ್ಗಾಯಿಸಲು ಇದುವೇ ಸೂಕ್ತ ಸಮಯ ಎಂಬುದನ್ನು ಧೋನಿ ಅರಿತುಕೊಂಡಿದ್ದರು ಎಂದು ವಿಶ್ವನಾಥನ್ ವಿವರಿಸಿದ್ದಾರೆ.

ಇದು ಧೋನಿ ಆಲೋಚನೆಯಲ್ಲಿತ್ತು. ಅಲ್ಲದೆಸರಿಯಾದಸಮಯಕ್ಕಾಗಿ ಕಾಯುತ್ತಿದ್ದರು. ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿರುವ ಜಡೇಜ ಅವರಿಗೆ ನಾಯಕತ್ವ ವಹಿಸಿಕೊಡಲು ಇದುವೇಸೂಕ್ತ ಸಮಯ ಎಂದು ನಂಬಿದ್ದರು. ಫ್ರಾಂಚೈಸ್‌ ಹಿತದೃಷ್ಟಿಯು ಅವರ ಮನದಲ್ಲಿತ್ತು ಎಂದು ಹೇಳಿದ್ದಾರೆ.



ವೈಯಕ್ತಿಕವಾಗಿ ಈ ಬಗ್ಗೆ ಧೋನಿ ಹೇಳದಿದ್ದರೂ ಕಳೆದ ವರ್ಷವೇ ಜಡೇಜಗೆ ವಿಷಯ ಮುಟ್ಟಿಸಲಾಗಿತ್ತು. ಯಾಕೆಂದರೆ ಧೋನಿ ಸ್ಥಾನ ತುಂಬಲು ಜಡೇಜ ಸಮರ್ಥರು ಎಂಬುದನ್ನು ಫ್ರಾಂಚೈಸ್ ಅರಿತುಕೊಂಡಿತ್ತು. ಅಲ್ಲದೆ ಓರ್ವ ಆಟಗಾರನಾಗಿ ಹೊಸ ನಾಯಕನಿಗೆ ಧೋನಿ ನೆರವು ಕೂಡಾ ಸಿಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.