ಅಹಮದಾಬಾದ್: ಐಪಿಎಲ್ 18ನೇ ಆವೃತ್ತಿಯು ಕೊನೆಯ ಘಟ್ಟ ತಲುಪಿದ್ದು, ಈ ಬಾರಿ ಕಪ್ ಗೆಲ್ಲುವ ತಂಡ ಯಾವುದು ಎನ್ನುವ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.
ಈ ಬಾರಿಯ ಐಪಿಎಲ್ ಪ್ಲೇ-ಆಫ್ಗೆ ಆರ್ಸಿಬಿ, ಗುಜರಾತ್, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಲಗ್ಗೆ ಇಟ್ಟಿದ್ದವು.
ಮೊದಲ ಕ್ವಾಲಿಫಯರ್ನಲ್ಲಿ ಪಂಜಾಬ್ ತಂಡವನ್ನು ಮಣಿಸಿದ ಆರ್ಸಿಬಿ ಈಗಾಗಲೇ ಫೈನಲ್ ಪ್ರವೇಶಿಸಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಮುಗ್ಗರಿಸಿದ ಗಿಲ್ ನಾಯಕತ್ವದ ಗುಜರಾತ್ ತಂಡ ಟೂರ್ನಿಯಿಂದ ಹೊರಬಿದಿದ್ದು, ಶನಿವಾರ ನಡೆಯುವ ಕ್ವಾಲಿಫಯರ್-2ನಲ್ಲಿ ಪಂಜಾಬ್ ಹಾಗೂ ಮುಂಬೈ ತಂಡಗಳು ಸೆಣಸಾಡಲಿವೆ.
ಇದೀಗ ಆರ್ಸಿಬಿ, ಪಂಜಾಬ್ ಹಾಗೂ ಮುಂಬೈ ತಂಡಗಳಿಗೆ ಮಾತ್ರ ಈ ಬಾರಿಯ ಐಪಿಎಲ್ ಕಪ್ ಎತ್ತಿ ಹಿಡಿಯುವ ಅವಕಾಶವಿದೆ.
ಇರುವ ಮೂವರಲ್ಲಿ ಕಪ್ ಗೆಲ್ಲುವವರು ಯಾರು..
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಅರ್ಸಿಬಿ): ಪ್ರತಿ ಬಾರಿಯ ಐಪಿಎಲ್ನಲ್ಲೂ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿ ಬರುವ ಆರ್ಸಿಬಿ ತಂಡವು 18 ಆವೃತ್ತಿಗಳಲ್ಲಿ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ರಜತ್ ಪಾಟೀದಾರ್ ನಾಯಕತ್ವ ತಂಡವು 'ಈ ಸಲ ನಮ್ದೆ' ಎನ್ನುವ ಆತ್ಮವಿಶ್ವಾಸದಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ತಂಡದ ಬಲ:
*ತವರಿನಾಚೆ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಗೆಲವು ಸಾಧಿಸಿದೆ.
*ಪ್ರತಿ ಬಾರಿಯಂತೆ, ಈ ಬಾರಿ ಟಾಪ್ ಆರ್ಡರ್ ಬ್ಯಾಟಿಂಗ್ ಮಾತ್ರವನ್ನು ತಂಡ ನೆಚ್ಚಿಕೊಂಡಿಲ್ಲ. ಮಧ್ಯಮ ಕ್ರಮಾಂಕದ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
*ತಂಡವು ಸಂಘಟಿತ ಪ್ರದರ್ಶನ ನೀಡುತ್ತಿದ್ದು, ಈ ಬಾರಿ 9 ಜನರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದೇ ಇದಕ್ಕೆ ಸಾಕ್ಷಿ.
*ವಿರಾಟ್, ಸಾಲ್ಟ್ರಿಂದ ಉತ್ತಮ ಆರಂಭ
*ನಾಯಕ ಪಾಟೀದಾರ್, ಮಯಾಂಕ್, ಜಿತೇತ್, ಡೇವಿಡ್, ಕೃನಾಲ್ ಸೇರಿದಂತೆ ಬಲಾಢ್ಯ ಮಧ್ಯಮ ಕ್ರಮಾಂಕ
*ವೇಗಿ ಜೋಶ್ ಹೇಜಲ್ವುಡ್ ತಂಡಕ್ಕೆ ಮರಳಿರುವುದು ಬೌಲಿಂಗ್ ಪಡೆಯನ್ನು ಮತ್ತಷ್ಟು ಸದೃಢವಾಗಿಸಿದೆ.
*ತಂಡವಾಗಿ ಉತ್ತಮ ಪ್ರದರ್ಶನ
ತಂಡದ ದೌರ್ಬಲ್ಯ:
*ಬ್ಯಾಟಿಂಗ್ನಲ್ಲಿ ವಿರಾಟ್ ಮೇಲಿನ ಹೆಚ್ಚಿನ ಅವಲಂಬನೆ.
*ಪ್ರಮುಖ ವೇಳೆಯಲ್ಲಿ ಕೈಕೊಡುವ ಮಧ್ಯಮ ಕ್ರಮಾಂಕ
*ಹೇಜಲ್ವುಡ್ ಹೊರತು ಪಡಿಸಿದರೆ ದುರ್ಬಲವಾಗಿ ಕಾಣುವ ಬೌಲಿಂಗ್ ಪಡೆ.
* ಉತ್ತಮ ಫಾರ್ಮ್ನಲ್ಲಿದ್ದ ಟಿಮ್ ಡೇವಿಡ್ ಗಾಯಗೊಂಡಿರುವುದು. ಮತ್ತೊಬ್ಬ ಅಲ್ರೌಂಡರ್ ಲಿವಿಂಗ್ಸ್ಟನ್ ಅವರಿಂದಲೂ ನಿರೀಕ್ಷಿತ ಆಟ ಬರುತ್ತಿಲ್ಲ.
ಪಂಜಾಬ್ ಕಿಂಗ್ಸ್: 12 ವರ್ಷಗಳ ನಂತರ ಪ್ಲೇ ಆಫ್ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧದ ಕ್ವಾಲಿಫಯರ್-2 ಗೆದ್ದು, ಫೈನಲ್ ಪ್ರವೇಶಿಸುವ ಮೂಲಕ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಶ್ರೇಯಸ್ ಅಯ್ಯರ್ ಪಡೆಯು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ.
ಪಂಜಾಬ್ ಕಿಂಗ್ಸ್
ತಂಡದ ಬಲ:
*ಶ್ರೇಯಸ್ ಐಯ್ಯರ್ ನಾಯಕತ್ವ.
*ಉತ್ತಮ ಫಾರ್ಮ್ನಲ್ಲಿರುವ ಬ್ಯಾಟಿಂಗ್ ಪಡೆ
*ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿರುವ ತಂಡ
*ಕಡಿಮೆ ಮೊತ್ತವನ್ನು ಕೂಡ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯವಿರುವ ಬೌಲಿಂಗ್ ಪಡೆ
*ಗೆಲ್ಲುವ ಹುಮ್ಮಸ್ಸು
ತಂಡದ ದೌರ್ಬಲ್ಯ:
*ಅನುಭವಿ ಆಟಗಾರರ ಕೊರತೆ
*ಪ್ರಮುಖ ಬೌಲರ್ ಚಹಲ್ ಗಾಯಗೊಂಡಿರುವುದು.
*ಕ್ವಾಲಿಫಯರ್-1 ನಲ್ಲಿ ಆರ್ಸಿಬಿ ವಿರುದ್ಧದ ಬಾರಿ ಸೋಲು, ಮುಂದಿನ ಪಂದ್ಯಗಳಲ್ಲಿ ಪರಿಣಾಮ ಬೀರಬಹುದು.
*ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಬ್ಯಾಟರ್ಸ್. ಯುವ ಆಟಗಾರರ ಮೇಲೆಯೇ ಹೆಚ್ಚಿನ ಅವಲಂಬನೆ.
ಮುಂಬೈ ಇಂಡಿಯನ್ಸ್: ಐಪಿಎಲ್ನಲ್ಲಿ 6ನೇ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಲ್ಲಿರುವ ಮುಂಬೈ ತಂಡವು, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದು. ಮೊದಲ ಐದು ಪಂದ್ಯದಲ್ಲಿ ನಾಲ್ಕರಲ್ಲಿ ಸೋತರು, ನಂತರ ಸಂಘಟಿತ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಕಪ್ ಮೇಲೂ ಕಣ್ಣಿಟ್ಟಿದೆ.
ಮುಂಬೈ ಇಂಡಿಯನ್ಸ್
ತಂಡದ ಬಲ:
*ಆಡುವ ಬಳಗದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಆಟಗಾರರಿಂದ ಕೂಡಿರುವ ತಂಡ
*ರೋಹಿತ್, ಬೂಮ್ರಾ, ಪಾಂಡ್ಯ, ಸೂರ್ಯ ಕುಮಾರ್ ಯಾದವ್ ತರಹದ ಅನುಭವಿ ಆಟಗಾರ ಪಡೆಯೇ ತಂಡದಲ್ಲಿದೆ.
*ರೋಹಿತ್, ಸೂರ್ಯ ಕುಮಾರ್, ತಿಲಕ್, ನಮನ್ ಧೀರ್, ಹಾರ್ದಿಕ್ ಪಾಂಡ್ಯರಂತಹ ಸ್ಪೋಟಕ ಆಟಗಾರರ ಬ್ಯಾಟಿಂಗ್ ಲೈನ್ ಅಪ್
*ಎಂತಹ ಬ್ಯಾಟರ್ಗಳಿಗೂ ಕಾಟ ಕೊಡಬಲ್ಲ ಬೂಮ್ರಾ, ದೀಪಕ್ ಚಹರ್, ಟ್ರೆಂಟ್ ಬೌಲ್ಟ್ ತರಹದ ಅನುಭವಿ ವೇಗಿಗಳು ತಂಡದಲ್ಲಿದ್ದಾರೆ.
*ರೋಹಿತ್ ಶರ್ಮಾ ಮರಳಿ ಫಾರ್ಮ್ ಕಂಡುಕೊಂಡಿರುವುದು ಹಾಗೂ ಜಾನಿ ಬೆಸ್ಟೊ ತಂಡದೊಳಗೆ ಸೇರಿಕೊಂಡಿರುವುದು ಬಲ ಹೆಚ್ಚಿಸಿದೆ.
*ತಂಡದ ಸಂಘಟಿತ ಹೋರಾಟ.
ತಂಡದ ದೌರ್ಬಲ್ಯ:
*ಬೂಮ್ರಾ ಮೇಲೆ ಅವಲಂಬಿತವಾಗಿರುವ ಬೌಲಿಂಗ್ ಪಡೆ
*ತಂಡದಲ್ಲಿ ಬಲಾಢ್ಯ ಸ್ಪಿನ್ ಬೌಲರ್ಗಳಿಲ್ಲ
*ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ರೋಹಿತ್
ಶನಿವಾರ ನಡೆಯುವ ಕ್ವಾಲಿಫಯರ್-2 ಗೆದ್ದ ತಂಡವು ಅಹಮದಾಬಾದ್ನಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿದ್ದು, ಈ ಬಾರಿ ಕಪ್ ಯಾರಿಗೆ ಎನ್ನುವ ಪ್ರಶ್ನೆಗೆ ಜೂನ್ 3ರಂದು ಉತ್ತರ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.