ಬೆಂಗಳೂರು: ‘ನಾವು ಮೊದಲೆರಡೂ ಪಂದ್ಯಗಳಿಗೆ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಲು ಕೇಳಿದ್ದೆವು. ಆದರೆ ಬ್ಯಾಟಿಂಗ್ ಮಾಡಲು ಕಠಿಣ ಸವಾಲೊಡ್ಡುವಂತಹ ಅಂಕಣ ಸಿದ್ಧಪಡಿಸಿದ್ದಾರೆ. ಇದರಿಂದಾಗಿ ತವರಿನಂಗಳದ ಲಾಭ ಸಂಪೂರ್ಣವಾಗಿ ನಮಗೆ ಸಿಗಲಿಲ್ಲ’–
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಅವರು ಹೇಳಿದ ಮಾತುಗಳಿವು. ಈ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 6 ವಿಕೆಟ್ಗಳಿಂದ ಸೋತಿತು. ತವರಿನಂಗಳದಲ್ಲಿ ಆರ್ಸಿಬಿ ಸೋತ ಎರಡನೇ ಪಂದ್ಯ ಇದಾಗಿದೆ.
‘ನಮಗೆ ಯಾವ ರೀತಿಯ ಪಿಚ್ ಲಭಿಸಿತ್ತೋ ಅದೇ ರೀತಿ ಆಡಿದ್ದೇವೆ. ಈ ಕುರಿತು ಅವರೊಂದಿಗೆ (ಪಿಚ್ ಕ್ಯುರೇಟರ್) ಚರ್ಚಿಸುತ್ತೇವೆ. ಅವರ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಅವರು ಉತ್ತಮವಾದ ಪಿಚ್ ಸಿದ್ಧಗೊಳಿಸಬಲ್ಲರು’ ಎಂದು ದಿನೇಶ್ ಹೇಳಿದರು.
‘ಪಿಚ್ ತುಸು ಜಿಗುಟುತನದಿಂದ ಕೂಡಿತ್ತು. ಇನಿಂಗ್ಸ್ ಆರಂಭದಲ್ಲಿ ನಾಲ್ಕು ಓವರ್ ಬ್ಯಾಟಿಂಗ್ ಸುಲಭವಾಗಿತ್ತು. ನಂತರ 13ನೇ ಓವರ್ನವರೆಗೂ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದೆವು. ದೊಡ್ಡ ಸ್ಕೋರ್ ಗಳಿಸುವ ಹಾದಿಯಲ್ಲಿ ಸ್ವಲ್ಪ ತಡಬಡಾಯಿಸಿದೆವು. ಆ ತಂಡ (ಡೆಲ್ಲಿ) ಕೂಡ ಆರಂಭದಲ್ಲಿಯೇ ಸಂಕಷ್ಟಕ್ಕೊಳಗಾಗಿತ್ತು. 50 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು’ ಎಂದು ದಿನೇಶ್ ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.