ಬೆಂಗಳೂರು: ‘ಇದು ನನ್ನ ನೆಲ. ನನ್ನ ತವರು. ಇಲ್ಲಿನ ಮೈದಾನದ ಬಗ್ಗೆ ಉಳಿದ ಎಲ್ಲರಿಗಿಂತ ಹೆಚ್ಚು ತಿಳಿದುಕೊಂಡಿದ್ದೇನೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್– ಬ್ಯಾಟರ್ ಕೆ.ಎಲ್.ರಾಹುಲ್ ಪ್ರತಿಕ್ರಿಯಿಸಿದರು.
‘20 ಓವರುಗಳ ಕಾಲ ವಿಕೆಟ್ ಹಿಂದುಗಡೆ ನಿಂತು ಪಿಚ್ ಹೇಗೆ ವರ್ತಿಸುತ್ತದೆ ಎಂದು ಗಮನಿಸುತ್ತಿದ್ದುದು ನನಗೆ ನೆರವಾಯಿತು’ ಎಂದು ಅವರು ಗುರುವಾರ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಾನು ಉತ್ತಮ ಆರಂಭ ಪಡೆಯಲು ಬಯಸಿದ್ದೆ. ಅದಾದ ಬಳಿಕ ನಂತರ ಚೆಂಡನ್ನು ಎಲ್ಲಿ ಆಡಬೇಕೆಂಬುದನ್ನು ಮನಸ್ಸಿನಲ್ಲಿ ಸ್ಪಷ್ಟಮಾಡಿ ಕೊಂಡೆ. ಇಂಥ ಪಿಚ್ಗಳಲ್ಲಿ ನನ್ನ ಸಾಮರ್ಥ್ಯ ಏನೆಂಬುದರ ಅಂದಾಜು ನನಗಿತ್ತು. ಕೀಪಿಂಗ್ ವೇಳೆ ಬ್ಯಾಟರ್ಗಳು ಹೇಗೆ ಔಟಾದರು; ಎಲ್ಲಿ ಸಿಕ್ಸರ್ ಹೊಡೆದರು ಎಂಬುದನ್ನು ಗಮನಿಸಿದ್ದೆ. ಜೀವದಾನ ದೊರಕಿದ್ದು ವರವಾಯಿತು’ ಎಂದು 32 ವರ್ಷ ವಯಸ್ಸಿನ ಆಟಗಾರ ತಿಳಿಸಿದರು.
ಈ ಹಿಂದೆಯೂ ರಾಹುಲ್, ಆರ್ಸಿಬಿ ತಂಡವನ್ನು ಕಾಡಿದ್ದು ಇದೆ. ದುಬೈನಲ್ಲಿ ನಡೆದಿದ್ದ (2020 ಸೆಪ್ಟೆಂಬರ್) ಐಪಿಎಲ್ ಪಂದ್ಯದಲ್ಲಿ ಅವರು ಪಂಜಾಬ್ ಕಿಂಗ್ಸ್ ನಾಯಕನಾಗಿ ಅಜೇಯ 132 ರನ್ ಬಾರಿಸಿದ್ದರು. ಆ ಪಂದ್ಯವನ್ನು ಆರ್ಸಿಬಿ 97 ರನ್ಗಳಿಂದ ಸೋತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.