ADVERTISEMENT

IPL-2020 | KKR vs CSK: ಋತುರಾಜ್ ಆಟಕ್ಕೆ ಒಲಿದ ಗೆಲುವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 20:12 IST
Last Updated 29 ಅಕ್ಟೋಬರ್ 2020, 20:12 IST
ಋತುರಾಜ್ ಗಾಯಕವಾಡ್ (ಐಪಿಎಲ್‌–ಟ್ವಿಟರ್ ಚಿತ್ರ)
ಋತುರಾಜ್ ಗಾಯಕವಾಡ್ (ಐಪಿಎಲ್‌–ಟ್ವಿಟರ್ ಚಿತ್ರ)   
""

ದುಬೈ: ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಗಳಿಸಿದ ಸತತ ಸಿಕ್ಸರ್‌ಗಳು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿದವು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮದಲ್ಲಿ ಮಿಂದಿತು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ 173 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕವಾಡ್ (72; 53 ಎಸೆತ, 6 ಬೌಂಡರಿ, 2 ಸಿಕ್ಸರ್) ಮೋಹಕ ಬ್ಯಾಟಿಂಗ್ ಮಾಡಿ ಉತ್ತಮ ಅಡಿಪಾಯ ಹಾಕಿದ್ದರು. ಅಂತಿಮ ಓವರ್‌ನಲ್ಲಿ ಗೆಲುವಿಗೆ 10 ರನ್‌ಗಳು ಬೇಕಾಗಿದ್ದವು. ಕಮಲೇಶ್ ನಾಗರಕೋಟಿ ಹಾಕಿದ ಓವರ್‌ನಲ್ಲಿ ಸಿಕ್ಸರ್‌ಗಳನ್ನು ಸಿಡಿಸಿ ಜಡೇಜ (31, 11ಎ, 2 ಬೌಂ, 3 ಸಿ) ಆರು ವಿಕೆಟ್‌ಗಳ ಜಯ ಗಳಿಸಿಕೊಟ್ಟರು.

ನಿತೀಶ್ ರಾಣಾ ಅರ್ಧಶತಕ: ಟಾಸ್ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಕೋಲ್ಕತ್ತ ಸವಾಲಿನ ಮೊತ್ತ ಪೇರಿಸಿತು.

ADVERTISEMENT

ಶುಭಮನ್ ಗಿಲ್ (26; 17ಎಸೆತ, 4ಬೌಂಡರಿ) ಮತ್ತು ನಿತೀಶ್ ರಾಣಾ (87; 61ಎ, 10ಬೌಂ, 4ಸಿ) ಮೊದಲ ಏಳು ಓವರ್‌ಗಳಲ್ಲಿ ತಂಡದ ಮೊತ್ತವನ್ನು ಅರ್ಧಶತಕದ ಗಡಿ ದಾಟಿಸಿದರು.

ಸ್ಪಿನ್ನರ್ ಕರ್ಣ ಶರ್ಮಾ ಎಂಟನೇ ಓವರ್‌ನಲ್ಲಿ ಜೊತೆಯಾಟ ಮುರಿದರು. ಸುನಿಲ್ ನಾರಾಯಣ್, ರಿಂಕು ಸಿಂಗ್ಆವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ ರಾಣಾ ಮಾತ್ರ ತಮ್ಮ ತೋಳ್ಬಲ ಪ್ರದರ್ಶಿಸಿದರು. ಅವರ ಆಟದಲ್ಲಿ ತಾಳ್ಮೆ ಇತ್ತು. ಏಕಾಗ್ರತೆಯೂ ಮೇಳೈಸಿತ್ತು. 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಾರ್ಗನ್ ಜೊತೆಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಅವರು 44 ರನ್ ಗಳಿಸಿದರು.

ಶತಕದ ಹಾದಿಯಲ್ಲಿದ್ದ ನಿತೀಶ್ 18ನೇ ಓವರ್‌ನಲ್ಲಿ ಲುಂಗಿ ಗಿಡಿ ಎಸೆತದಲ್ಲಿ ಸ್ಯಾಮ್ ಕರನ್‌ಗೆ ಕ್ಯಾಚಿತ್ತು ಮರಳಿದರು. ಮಾರ್ಗನ್ ಜೊತೆಗೂಡಿದ ನಿಕಟಪೂರ್ವ ನಾಯಕ ದಿನೇಶ್ ಕಾರ್ತಿಕ್ ಐದನೇ ವಿಕೆಟ್ ಜೊತೆಯಾಟದಲ್ಲಿ 30 ರನ್‌ ಸೇರಿಸಿದರು.ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ನಾಯಕ ಏಯಾನ್ ಮಾರ್ಗನ್ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.