ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಹಣ ಗಳಿಕೆಯ ಯಂತ್ರವೆಂದು ಹೇಳುತ್ತಾರೆ. ಅದರಿಂದ ಏನೂ ನಷ್ಟವಿಲ್ಲ. ಅದು ಕ್ರಿಕೆಟಿಗರು ಮತ್ತು ದೇಶದ ಬೊಕ್ಕಸಕ್ಕೆ ಹಂಚಿಕೆಯಾಗುತ್ತದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
’ಐಪಿಎಲ್ ಬಗ್ಗೆ ಮೊದಲಿನಿಂದಲೂ ಇಂತಹ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅದರಿಂದ ಬರುವ ಆದಾಯದಲ್ಲಿ ಬಹುಪಾಲು ಹಣವು ಆಟಗಾರರಿಗೆ ಹೋಗುತ್ತದೆ. ಮತ್ತಷ್ಟು ದೊಡ್ಡ ಪಾಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆಸಂದಾಯವಾಗುತ್ತದೆ. ಅಲ್ಲದೇ ಪ್ರವಾಸೋದ್ಯಮ, ಪ್ರಚಾರ ಮತ್ತಿತರ ಮೂಲಗಳ ಮೂಲಕ ಜನಸಾಮಾನ್ಯರಿಗೆ ಆದಾಯ ಗಳಿಸುವ ಅವಕಾಶಗಳು ಸೃಷ್ಟಿಯಾಗುತ್ತವೆ. ಐಪಿಎಲ್ ಹಣದಲ್ಲಿ ಬಿಸಿಸಿಐ ಪದಾಧಿಕಾರಿಗಳಿಗೆ ಏನೂ ಸಿಗುವುದಿಲ್ಲ‘ ಎಂದರು.
’ಟೂರ್ನಿಗೆ ಇರುವ ಚೀನಾ ಕಂಪೆನಿ ಪ್ರಾಯೋಜಕತ್ವದ ಮುಂದುವರಿಕೆಯ ಕುರಿತು ಆಡಳಿತ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗುವುದು. ಶೀಘ್ರದಲ್ಲಿ ಸಭೆ ಆಯೋಜಿಸುತ್ತೇವೆ‘ ಎಂದು ಧುಮಾಲ್ ’ಕ್ರಿಕ್ಬಜ್ ಡಾಟ್ ಕಾಮ್‘ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
’ದೇಶಿ ಟೂರ್ನಿಗಳ ಕುರಿತು ಈಗಲೇ ಏನೂ ಹೇಳುವಂತಿಲ್ಲ. ಏಕೆಂದರೆ, ಸದ್ಯದ ಕೊರೊನಾ ವೈರಸ್ ಪ್ರಸರಣ ಹೆಚ್ಚುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಮಾತ್ರ ವೇಳಾಪಟ್ಟಿಯನ್ನು ರಚಿಸಲು ಸಾಧ್ಯ‘ ಎಂದರು.
ಅಕ್ಟೋಬರ್–ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯದಿದ್ದರೆ ಐಪಿಎಲ್ ಆಯೋಜಿಸಲು ಬಿಸಿಸಿಐಗೆ ದಾರಿ ಸುಗಮವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.