ರಾಂಚಿ : ಎದುರಾಳಿಗಳ ಬೌಲಿಂಗ್ ದಾಳಿಗೆ ಕಂಗೆಟ್ಟ ಜಾರ್ಖಂಡ್ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಸಿ’ ಗುಂಪಿನ ಪಂದ್ಯದಲ್ಲಿ ತವರಿನಲ್ಲೇ ಮುಗ್ಗರಿಸಿತು. ಜಮ್ಮು ಮತ್ತು ಕಾಶ್ಮೀರ ತಂಡ ಇನಿಂಗ್ಸ್, 27 ರನ್ಗಳ ಜಯಭೇರಿ ಮೊಳಗಿಸಿತು.
ಮೊದಲ ಇನಿಂಗ್ಸ್ನಲ್ಲಿ 182 ರನ್ಗಳ ಹಿನ್ನಡೆಗೆ ಒಳಗಾಗಿದ್ದ ಜಾರ್ಖಂಡ್ ಮೂರನೇ ದಿನವಾದ ಭಾನುವಾರದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು. ಕೊನೆಯ ದಿನ 52 ರನ್ ಗಳಿಸುವಷ್ಟರಲ್ಲಿ ಉಳಿದ ಆರು ವಿಕೆಟ್ಗಳನ್ನು ಕಳೆದುಕೊಂಡಿತು. 26.4 ಓವರ್ಗಳಲ್ಲಿ ಆತಿಥೇಯರ ಇನಿಂಗ್ಸ್ಗೆ ಜಮ್ಮು ಮತ್ತು ಕಾಶ್ಮೀರ ತೆರೆ ಎಳೆಯಿತು.
ಎಡಗೈ ಮಧ್ಯಮ ವೇಗಿ ಅಕಿಬ್ ನಬಿ ಐದು ವಿಕೆಟ್ಗಳ ಗೊಂಚಲು ಗಳಿಸಿ ಜಮ್ಮು ಮತ್ತು ಕಾಶ್ಮೀರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅನುಭವಿ ಇಶಾಂಕ್ ಜಗ್ಗಿ (34;96 ಎಸೆತ, 2 ಬೌಂಡರಿ) ಕೆಲ ಕಾಲ ಪ್ರತಿರೋಧ ಒಡ್ಡಿದರೂ ಇಶಾನ್ ಕಿಶನ್ ಮತ್ತು ವಿರಾಟ್ ಸಿಂಗ್ ಒಳಗೊಂಡಂತೆ ಉಳಿದ ಯಾರಿಗೂ ಮಿಂಚಲು ಸಾಧ್ಯವಾಗಲಿಲ್ಲ.
ಜಾರ್ಖಂಡ್ಗೆ ನಾಲ್ಕು ಪಂದ್ಯಗಳಲ್ಲಿ ಇದು ಮೊದಲ ಸೋಲು. ಗೆಲುವಿನೊಂದಿಗೆ ಜಮ್ಮು ಕಾಶ್ಮೀರದ ಪಾಯಿಂಟ್ 20ಕ್ಕೇರಿತು.
ಹರಿಯಾಣವು ಛತ್ತೀಸಗಢವನ್ನು 89 ರನ್ಗಳಿಂದ ಮಣಿಸಿತು. ಒಡಿಶಾ ಮತ್ತು ತ್ರಿಪುರಾ ನಡುವಿನ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು.
ಸಂಕ್ಷಿಪ್ತ ಸ್ಕೋರು
ರಾಂಚಿ:ಮೊದಲ ಇನಿಂಗ್ಸ್ -ಜಾರ್ಖಂಡ್: 259; ಜಮ್ಮು ಮತ್ತು ಕಾಶ್ಮೀರ: ಮೊದಲ ಇನಿಂಗ್ಸ್: 441; ಜಾರ್ಖಂಡ್–ಎರಡನೇ ಇನಿಂಗ್ಸ್: 54.4 ಓವರ್ಗಳಲ್ಲಿ 155 (ನಸೀಮ್ 37, ಇಶಾಂಕ್ ಜಗ್ಗಿ 34; ಆಕೀಬ್ ನಬಿ 38ಕ್ಕೆ5). ಫಲಿತಾಂಶ: ಜಮ್ಮು ಮತ್ತು ಕಾಶ್ಮೀರಕ್ಕೆ ಇನಿಂಗ್ಸ್, 27 ರನ್ಗಳ ಜಯ; 7 ಪಾಯಿಂಟ್.
ರಾಯಪುರ:ಮೊದಲ ಇನಿಂಗ್ಸ್ -ಹರಿಯಾಣ:123; ಛತ್ತೀಸಗಢ: 117; ಎರಡನೇ ಇನಿಂಗ್ಸ್: ಹರಿಯಾಣ: 258; ಛತ್ತೀಸಗಢ: 50.5 ಓವರ್ಗಳಲ್ಲಿ 173 (ಅವಿನಾಶ್ ಸಿಂಗ್ 69, ಅಮನ್ದೀಪ್ ಖಾರೆ 38; ಎಸ್.ಪಿ.ಕುಮಾರ್ 24ಕ್ಕೆ3). ಫಲಿತಾಂಶ: ಹರಿಯಾಣಕ್ಕೆ 89 ರನ್ಗಳ ಜಯ; 6 ಪಾಯಿಂಟ್.
ಅಗರ್ತಲ:ಮೊದಲ ಇನಿಂಗ್ಸ್-ತ್ರಿಪುರ: 6ಕ್ಕೆ 288 ರನ್ ಡಿಕ್ಲೇರ್; ಒಡಿಶಾ: ಮೊದಲ ಇನಿಂಗ್ಸ್: 121; ಎರಡನೇ ಇನಿಂಗ್ಸ್: 22 ಓವರ್ಗಳಲ್ಲಿ 1 ವಿಕೆಟ್ಗೆ 71 (ಗೋವಿಂದ ಪೊದ್ದಾರ್ 33, ಶುಭ್ರಾಂಶು ಸೇನಾಪತಿ 26; ರಾಣಾ ದತ್ತ 7ಕ್ಕೆ1). ಫಲಿತಾಂಶ: ಪಂದ್ಯ ಡ್ರಾ: ತ್ರಿಪುರಕ್ಕೆ 3 ಪಾಯಿಂಟ್ಸ್, ಒಡಿಶಾಗೆ 1 ಪಾಯಿಂಟ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.