ಗುವಾಹಟಿ : ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮವೇಗಿ ಜಸ್ಪ್ರೀತ್ ಬೂಮ್ರಾ ಶುಕ್ರವಾರ ಬರ್ಸಾಪರ ಕ್ರೀಡಾಂಗಣದ ನೆಟ್ಸ್ ಅಭ್ಯಾಸದಲ್ಲಿ ಭಾಗವಹಿಸಿದ್ದರು.
ಭಾನುವಾರ ಇಲ್ಲಿ ನಡೆಯಲಿರುವ ಶ್ರೀಲಂಕಾ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಬಳಗವು ಇಲ್ಲಿ ಅಭ್ಯಾಸ ನಡೆಸಿತು. ಇದೇ ಸಂದರ್ಭದಲ್ಲಿ ಬೂಮ್ರಾ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದರು.
ತಮ್ಮ ಬತ್ತಳಿಕೆಯ ವಿಶೇಷ ಅಸ್ತ್ರಗಳಾದ ಯಾರ್ಕರ್, ಬೌನ್ಸರ್ಗಳನ್ನು ಪ್ರಯೋಗಿಸಿದರು. ಅವರೊಂದಿಗೆ ಶಾರ್ದೂಲ್ ಠಾಕೂರ್ ಮತ್ತು ಶಿವಂ ದುಬೆ ಕೂಡ ಅಭ್ಯಾಸ ಮಾಡಿದರು. ಸಿಂಗಲ್ ಸ್ಟಂಪ್ ಗುರಿಯಾಗಿಟ್ಟುಕೊಂಡು ಬೌಲಿಂಗ್ ಅಭ್ಯಾಸ ಮಾಡಿದರು. ಅವರು ಪ್ರತಿಯೊಂದು ಎಸೆತವನ್ನು ಪ್ರಯೋಗಿಸಿದ ನಂತರ ಕೋಚ್ ರವಿಶಾಸ್ತ್ರಿ, ವೈದ್ಯಕೀಯ ಸಿಬ್ಬಂದಿಯೊಂದಿಗೆ ಮಾತನಾಡಿ ಸಲಹೆ ಪಡೆಯುತ್ತಿದ್ದರು.
ಅದರ ನಂತರ ಸುಮಾರು 45 ನಿಮಿಷಗಳವರೆಗೆ ವ್ಯಾಯಾಮ ಮಾಡಿದರು. ಜಾಗಿಂಗ್ ಕೂಡ ಮಾಡಿದರು. ಅವರೊಂದಿಗೆ ಸಂಜು ಸ್ಯಾಮ್ಸನ್, ಕನ್ನಡಿಗ ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಕೂಡ ಇದ್ದರು. ಬೂಮ್ರಾ ಮೂಳೆಮುರಿತಕ್ಕೆ ಚಿಕಿತ್ಸೆ ಪಡೆದಿದ್ದರು. ಅವರು ಗುಜರಾತ್ ಪರ ರಣಜಿ ಪಂದ್ಯದಲ್ಲಿ ತಮ್ಮ ಫಿಟ್ನೆಸ್ ಟೆಸ್ಟ್ ನೀಡುವರು ಎಂದು ವರದಿಯಾಗಿತ್ತು. ಆದರೆ ಬಿಸಿಸಿಐ ಅವರಿಗೆ ಆ ಪರೀಕ್ಷೆಯಿಂದ ರಿಯಾಯಿತಿ ನೀಡಿ, ಭಾರತ ತಂಡಕ್ಕೆ ಸೇರ್ಪಡೆ ಮಾಡಿತ್ತು.
ಶಿಖರ್ ಧವನ್, ರವೀಂದ್ರ ಜಡೇಜ, ನವದೀಪ್ ಸೈನಿ, ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರು ವಿಶ್ರಾಂತಿ ಪಡೆದಿದ್ದರು. ಶ್ರೀಲಂಕಾ ತಂಡವೂ ಅಭ್ಯಾಸ ನಡೆಸಲಿಲ್ಲ.
ಗುವಾಹಟಿಯಲ್ಲಿ ಚಳಿ ಹೆಚ್ಚಾಗಿದ್ದು, ಶನಿವಾರ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.