
ಬೆಂಗಳೂರು: ಅನುಭವಿ ಆಟಗಾರರಾದ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಅಹಮದಾಬಾದಿನಲ್ಲಿ ಇದೇ 26ರಿಂದ ಟೂರ್ನಿಯ ಎಲೀಟ್ ಡಿ ಗುಂಪಿನ ಪಂದ್ಯಗಳು ನಡೆಯಲಿವೆ. ಉತ್ತರಾಖಂಡ, ರಾಜಸ್ಥಾನ, ತಮಿಳುನಾಡು, ದೆಹಲಿ, ಸೌರಾಷ್ಟ್ರ ಮತ್ತು ತ್ರಿಪುರ ತಂಡಗಳು ಈ ಗುಂಪಿನಲ್ಲಿವೆ. ಟೂರ್ನಿಯಲ್ಲಿ ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ಎದುರು ಆಡಲಿದೆ.
ದಕ್ಷಿಣ ಆಫ್ರಿಕಾ ಎದುರು ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ದೇವದತ್ತ ಇದ್ದಾರೆ. ಕರುಣ್ ಅವರು ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತದ ಐದು ಪಂದ್ಯಗಳಲ್ಲಿ ಒಟ್ಟು 602 ರನ್ ಪೇರಿಸಿದ್ದಾರೆ. 100.33 ಸರಾಸರಿಯಲ್ಲಿ ಅವರು ರನ್ ಗಳಿಸಿದ್ದಾರೆ. ಅದರಲ್ಲಿ ಒಟ್ಟು ಎರಡು ಶತಕಗಳೂ ಇವೆ. ಟಿ20 ತಂಡವನ್ನೂ ಮಯಂಕ್ ಅಗರವಾಲ್ ಮುನ್ನಡೆಸುವರು.
ತಂಡ ಇಂತಿದೆ:
ಮಯಂಕ್ ಅಗರವಾಲ್ (ನಾಯಕ), ಮೆಕ್ನಿಲ್ ನೊರೋನಾ, ಕೆ.ಎಲ್. ಶ್ರೀಜಿತ್, ಕರುಣ್ ನಾಯರ್, ಆರ್. ಸ್ಮರಣ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ, ಶ್ರೀವತ್ಸ ಆಚಾರ್ಯ, ಶುಭಾಂಗ್ ಹೆಗ್ಡೆ, ಪ್ರವೀಣ ದುಬೆ, ಬಿ.ಆರ್. ಶರತ್, ದೇವದತ್ತ ಪಡಿಕ್ಕಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.