ADVERTISEMENT

ವಿದರ್ಭ ತೊರೆದು ಕರ್ನಾಟಕ ತಂಡದಲ್ಲಿ ಮತ್ತೆ ಆಡಲಿರುವ ಕರುಣ್ ನಾಯರ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 14:18 IST
Last Updated 22 ಜುಲೈ 2025, 14:18 IST
ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಕರುಣ್ ನಾಯರ್ ತಾಲೀಮು ನಡೆಸಿದರು  –ಪಿಟಿಐ ಚಿತ್ರ
ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಕರುಣ್ ನಾಯರ್ ತಾಲೀಮು ನಡೆಸಿದರು  –ಪಿಟಿಐ ಚಿತ್ರ   

ಬೆಂಗಳೂರು: ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಆಡುತ್ತಿರುವ ಬ್ಯಾಟರ್ ಕರುಣ್ ನಾಯರ್ ಅವರು ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕ ತಂಡಕ್ಕೆ ಮರಳುವರು. 

ಬೆಂಗಳೂರಿನ ಕರುಣ್ ಅವರು 2013ರಿಂದ ಸುಮಾರು ಒಂದು ದಶಕದ ಕಾಲ ಅವರು ಕರ್ನಾಟಕ ತಂಡದಲ್ಲಿ ಆಡಿದ್ದರು. ಕೆಲವು ವರ್ಷ ನಾಯಕತ್ವ ಕೂಡ ನಿಭಾಯಿಸಿದ್ದರು. ಆದರೆ ಬ್ಯಾಟಿಂಗ್ ಲಯ ಕ್ಷೀಣಿಸಿದ್ದ ಕಾರಣ ಒಂದು ಹಂತದಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಅದರಿಂದಾಗಿ ಹೋದ ವರ್ಷ ಅವರು ವಿದರ್ಭ ತಂಡ ಸೇರ್ಪಡೆಯಾಗಿದ್ದರು. 

ಅಲ್ಲಿ ಅವರು ರನ್‌ಗಳ ಹೊಳೆ ಹರಿಸಿದ್ದರು. ರಣಜಿ ಟ್ರೋಫಿ ಟೂರ್ನಿಯಲ್ಲಿ 53ರ ಸರಾಸರಿಯಲ್ಲಿ 863 ರನ್‌ ಗಳಿಸಿದ್ದರು. ಫೈನಲ್‌ನಲ್ಲಿ ಕೇರಳ ತಂಡದ ಎದುರು ಶತಕ ಕೂಡ ದಾಖಲಿಸಿದ್ದರು. ವಿದರ್ಭ ತಂಡವು ಚಾಂಪಿಯನ್ ಆಗಿತ್ತು. ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿಯೂ ಅವರು 779 ರನ್‌ ಗಳನ್ನು ಕಲೆಹಾಕಿದ್ದರು. ತಂಡವು ರನ್ನರ್ಸ್ ಅಪ್ ಆಗಿತ್ತು. ಈ ಸಾಧನೆಗಳಿಂದಾಗಿ ಅವರು  ಭಾರತ ಎ ತಂಡದಲ್ಲಿ ಸ್ಥಾನ ಪಡೆದರು. ಇಂಗ್ಲೆಂಡ್ ಲಯನ್ಸ್ ಎದುರಿನ ಸರಣಿಯಲ್ಲಿಯೂ 542 ರನ್‌ ಗಳಿಸಿದರು. ಅದರಿಂದಾಗಿ ಭಾರತ ಟೆಸ್ಟ್ ತಂಡದಲ್ಲಿ ಎಂಟು ವರ್ಷಗಳ ನಂತರ ಸ್ಥಾನ ಪಡೆದಿದ್ದಾರೆ. 

ADVERTISEMENT

ಆದರೆ ಇಂಗ್ಲೆಂಡ್ ಎದುರಿನ ಸರಣಿಯ ಮೂರು ಪಂದ್ಯಗಳಲ್ಲಿ (0,20,31,26,40 ಮತ್ತು 14) ಅವರು ದೊಡ್ಡ ಇನಿಂಗ್ಸ್ ಆಡುವಲ್ಲಿ ಸಫಲರಾಗಿಲ್ಲ.

ಕರುಣ್ ತವರು ರಾಜ್ಯ ತಂಡಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ್ದಾರೆ. ವಿದರ್ಭ ಕ್ರಿಕೆಟ್ ಸಂಸ್ಥೆಯೂ ಅವರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೂಲಗಳು ಖಚಿತಪಡಿಸಿವೆ.

ಹೋದ ಋತುವಿನಲ್ಲಿ ಯುವ ಆಟಗಾರರಾದ ಆರ್. ಸ್ಮರಣ್, ಕೆ.ಎಲ್. ಶ್ರೀಜಿತ್ ಮತ್ತು ಕೆ.ವಿ. ಅನೀಶ್ ಅವರು ಮಿಂಚಿದ್ದರು. ಇದೀಗ 33 ವರ್ಷದ ಕರುಣ್ ಅವರು ಈ ನವಪ್ರತಿಭೆಗಳ ಪೈಪೋಟಿ ಎದುರಿಸಬೇಕಿದೆ. 

ತಂಡದಲ್ಲಿ ಸದ್ಯ ಮಯಂಕ್ ಅಗರವಾಲ್ ಅವರನ್ನು ಬಿಟ್ಟರೆ ಹೆಚ್ಚು ಅನುಭವಿ ಬ್ಯಾಟರ್ ಆಗಿ ಕರುಣ್ ನಾಯರ್ ತಂಡಕ್ಕೆ ಬಲ ತುಂಬುವ ನಿರೀಕ್ಷೆ ಮೂಡಿದೆ. 

ಆದರೆ ಇತ್ತೀಚೆಗಷ್ಟೇ ಮಧ್ಯಮವೇಗಿ ವಾಸುಕಿ ಕೌಶಿಕ್ ಅವರು ಕರ್ನಾಟಕ ಬಿಟ್ಟು ಗೋವಾ ತಂಡಕ್ಕೆ ತೆರಳುವುದಾಗಿ ಪ್ರಕಟಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.