ADVERTISEMENT

ಕೆಪಿಎಲ್ ಫಿಕ್ಸಿಂಗ್: ಚಾರ್ಜ್‌ಶೀಟ್ ಸಲ್ಲಿಕೆ

ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ * ಸಿಸಿಬಿ ತನಿಖೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:30 IST
Last Updated 7 ಫೆಬ್ರುವರಿ 2020, 19:30 IST
ಅರವಿಂದ್ ರೆಡ್ಡಿ
ಅರವಿಂದ್ ರೆಡ್ಡಿ   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

‘ಕಬ್ಬನ್‌ ಪಾರ್ಕ್, ಭಾರತಿನಗರ ಹಾಗೂ ಜೆ.ಪಿ.ನಗರ ಠಾಣೆಯಲ್ಲಿ ದಾಖ ಲಾಗಿದ್ದ ಮೂರು ಪ್ರಕರಣದಲ್ಲಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲರ ವಿರುದ್ಧ ಪ್ರಾಥಮಿಕ ಚಾರ್ಜ್‌ ಶೀಟ್ ಸಲ್ಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.

ಇನ್ನಷ್ಟು ಮಂದಿ ಯನ್ನು ಬಂಧಿಸಬೇಕಿದ್ದು, ಅದಾದ ನಂತರವೇ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಲಾಗು ವುದು’ ಎಂದು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ ತಿಳಿಸಿದರು.

ADVERTISEMENT

‘ಲಭ್ಯವಿರುವ ಪುರಾವೆ ಹಾಗೂ ಸಾಕ್ಷಿಗಳ ಹೇಳಿಕೆಯನ್ನು ಪಟ್ಟಿಯಲ್ಲಿ ದಾಖಲಿಸಲಾಗಿದೆ. ಯಾವ ರೀತಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿತ್ತು, ಇದರಲ್ಲಿ ಆರೋಪಿಗಳ ಪಾತ್ರವೇನು ಎಂಬುದೂ ಪಟ್ಟಿಯಲ್ಲಿದೆ. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ’ ಎಂದರು.

‘ಹೈಗ್ರೌಂಡ್ಸ್‌ ಠಾಣೆಯಲ್ಲೂ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಸಂಬಂಧ ಪ್ರಕರಣ ದಾಖಲಾಗಿದೆ. ಅದರ ತನಿಖೆಯೂ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ದೋಷಾರೋಪ ಪಟ್ಟಿ ವಿವರ: ಕಬ್ಬನ್ ಪಾರ್ಕ್‌ ಹಾಗೂ ಭಾರತಿನಗರ ಠಾಣೆ ಪ್ರಕರಣಗಳಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ಫಾಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ,ಆಟಗಾರರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ಎಂ. ವಿಶ್ವನಾಥನ್, ನಿಶಾಂತ್ ಶೇಖಾ ವತ್, ಕೋಚ್ ವಿನೂ ಪ್ರಸಾದ್, ಮಾಂಟಿ, ವೆಂಕಿ, ಕಿರಣ್‌, ಬುಕ್ಕಿ ಮಾವಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.

ಜೆ.ಪಿ.ನಗರ ಠಾಣೆ ಪ್ರಕರಣದಲ್ಲಿ ಬುಕ್ಕಿಗಳಾದ ಭಾವೇಶ್‌ ಬಾಫ್ನಾ, ಸಯ್ಯಮ್, ಜತಿನ್ ಹಾಗೂ ಹರೀಶ್ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಕೆಯಾಗಿದೆ.

‘ಬುಕ್ಕಿಗಳೇ ತಂಡದ ಮಾಲೀಕರು ಹಾಗೂ ಆಟಗಾರರನ್ನು ನೇರವಾಗಿ ಸಂಪರ್ಕಿಸಿ ಮ್ಯಾಚ್ ಫಿಕ್ಸಿಂಗ್‌ಗೆ ಒಪ್ಪಿಸುತ್ತಿದ್ದರು. ನಿಧಾನಗತಿ ಬ್ಯಾಟಿಂಗ್ ಮಾಡಬೇಕು ಹಾಗೂ ಒಂದು ಓವರ್‌ನಲ್ಲಿ 10ಕ್ಕೂ ಹೆಚ್ಚು ರನ್‌ ನೀಡಬೇಕೆಂದು ಆಟಗಾರರಿಗೆ ಹೇಳುತ್ತಿದ್ದರು. ಅದರಂತೆ ಆಟಗಾರರು ಆಡಿದ್ದರು. ಅದರ ಮೇಲೆಯೇ ಬುಕ್ಕಿಗಳು ಬೆಟ್ಟಿಂಗ್ ನಡೆಸಿದ್ದರು’ ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಮಂದಿ ಶಾಮೀಲು

‘ಬಂಧಿತ ಬುಕ್ಕಿಗಳು ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆಸಲು ಹಲವರನ್ನು ಸಂಪರ್ಕಿಸಿದ್ದರು. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.