
ಬೆಂಗಳೂರಿನಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟೇಶ್ ಪ್ರಸಾದ್ (ಮಧ್ಯದಲ್ಲಿ), ಸಂತೋಷ್ ಮೆನನ್ (ಕಾರ್ಯದರ್ಶಿ), ವಿನಯ್ ಮೃತ್ಯುಂಜಯ ಮತ್ತು ಸುಜೀತ್ ಸೋಮಸುಂದರ್ (ಉಪಾಧ್ಯಕ್ಷ) ಸಂಭ್ರಮಿಸಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 1307 ಮತ ಚಲಾವಣೆಯಾಗಿದ್ದವು. ಐವರು ಪದಾಧಿಕಾರಿಗಳು ಮತ್ತು ಆಡಳಿತ ಸಮಿತಿಯ 10 ಸದಸ್ಯರ ಆಯ್ಕೆ ನಡೆಯಿತು.
ಅದರಲ್ಲಿ ಟೀಮ್ ಗೇಮ್ ಚೇಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದ ಪ್ರಸಾದ್ ಅವರು 749 ಹಾಗೂ ಅವರ ಪ್ರತಿಸ್ಪರ್ಧಿ ಟೀಮ್ ಬ್ರಿಜೇಶ್ ಬಣದಿಂದ ಕಣಕ್ಕಿಳಿದಿದ್ದ ದಿ ಪ್ರಿಂಟರ್ಸ್ (ಮೈಸೂರು) ಲಿಮಿಟೆಡ್ ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್ ಅವರು 558 ಮತ ಗಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಸುಜೀತ್ ಸೋಮಸುಂದರ್ (719) ಅವರು ವಿನೋದ್ ಶಿವಪ್ಪ (588) ಎದುರು ಮೇಲುಗೈ ಸಾಧಿಸಿದರು. ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ (675) ಅವರು ಇ.ಎಸ್ . ಜಯರಾಮ್ (632) ವಿರುದ್ಧ ಗೆದ್ದರು. ಬಿ.ಎನ್. ಮಧುಕರ್ (736) ಅವರು ಎಂ.ಎಸ್. ವಿನಯ್ (571) ಎದುರು ಜಯಿಸಿ, ಖಜಾಂಚಿ ಸ್ಥಾನ ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬ್ರಿಜೇಶ್ ಬಣದ ಬಿ.ಕೆ. ರವಿ (669) ಅವರು ಎ.ವಿ. ಶಶಿಧರ್ (638) ಎದುರು ಜಯಿಸಿದರು.
ಆಡಳಿತ ಸಮಿತಿಯ ಸದಸ್ಯರಾಗಿ ವಿ.ಎಂ. ಮಂಜುನಾಥ್ , ಶೈಲೇಶ್ ಪೋಳ್ (ಇಬ್ಬರೂ ಆಜೀವ ಸದಸ್ಯರ ವಿಭಾಗ), ಕಲ್ಪನಾ ವೆಂಕಟಾಚಾರ್, ಆಶಿಶ್ ಅಮರಲಾಲ್, ಅವಿನಾಶ್ ವೈದ್ಯ (ಬೆಂಗಳೂರು ವಲಯ), ಶ್ರೀನಿವಾಸ್ ಪ್ರಸಾದ್ (ಮೈಸೂರು), ಡಿ.ಎಸ್. ಅರುಣ್ (ಶಿವಮೊಗ್ಗ), ಸಿ.ಆರ್. ಹರೀಶ್ (ತುಮಕೂರು), ವೀರಣ್ಣ ಸವಡಿ (ಧಾರವಾಡ), ಕುಶಾಲ್ ಪಾಟೀಲ ಗಡಗಿ (ರಾಯಚೂರು) ಮತ್ತು ಶೇಖರ್ ಶೆಟ್ಟಿ (ಮಂಗಳೂರು–ಅವಿರೋಧ) ಅವರು ಆಯ್ಕೆಯಾದರು.
‘ಸಂಸ್ಥೆಯ ಸದಸ್ಯರು ನಮಗೆ ಅವಕಾಶ ಕೊಟ್ಟಿದ್ದಾರೆ. ಇದು ಕ್ರಿಕೆಟ್ಗೆ ಒಲಿದ ಗೆಲುವು. ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಮಾಡಿರುವ ವಾಗ್ದಾನಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ’ ಎಂದು ಫಲಿತಾಂಶ ಪ್ರಕಟವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್ ಹೇಳಿದರು.
ಖ್ಯಾತನಾಮರಿಂದ ಮತದಾನ: ಭಾನುವಾರ ಮಧ್ಯಾಹ್ನ ಚುರುಕು ಬಿಸಿಲು ಇತ್ತು. ಇದೇ ಅವಧಿಯಲ್ಲಿ ಮತದಾನವೂ ಚುರುಕಾಯಿತು. ನಾಡಿನ ದಿಗ್ಗಜ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಬಿ.ಎಸ್. ಚಂದ್ರಶೇಖರ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವರು ಮತ ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.