
ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಐವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯನ್ನು ನೇಮಕ ಮಾಡಿದೆ.
ಈ ಸಮಿತಿಯಲ್ಲಿ ಭಾರತ ತಂಡದ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನೀಲ್ ಜೋಶಿ, ವಿಜಯ್ ಭಾರದ್ವಾಜ್ ಮತ್ತು ಜಯಶ್ರೀ ದೊರೈಸ್ವಾಮಿ ಅವರಿದ್ದಾರೆ.
ಸಂಸ್ಥೆಯ ನೂತನ ಆಡಳಿತ ಸಮಿತಿಯ ಸಭೆಯು ಮಂಗಳವಾರ ನಡೆಯಿತು. ಇದರಲ್ಲಿ ಸೀನಿಯರ್ ಮತ್ತು ವಿವಿಧ ವಯೋಮಿತಿಯ ತಂಡಗಳ ಆಯ್ಕೆ ಸಮಿತಿಗಳನ್ನೂ ನೇಮಕ ಮಾಡಲಾಯಿತು.
ಪುರುಷರ ಸೀನಿಯರ್ ಮತ್ತು 23 ವರ್ಷದೊಳಗಿನವರ ಸಮಿತಿಯ ಮುಖ್ಯಸ್ಥರಾಗಿ ಕರ್ನಾಟಕ ತಂಡದ ಮಾಜಿ ಆಟಗಾರ ಅಮಿತ್ ವರ್ಮಾ ಅವರನ್ನು ನೇಮಕ ಮಾಡಲಾಯಿತು.
23 ವರ್ಷದೊಳಗಿನವರ ತಂಡದ ತರಬೇತುದಾರರಾಗಿ ಗಣೇಶ್ ಸತೀಶ್ ಮತ್ತು ದೀಪಕ್ ಚೌಗುಲೆ ಅವರನ್ನು ನೇಮಕ ಮಾಡಲಾಯಿತು. ಇದಕ್ಕೂ ಮುನ್ನ ಸೋಮಶೇಖರ್ ಶಿರಗುಪ್ಪಿ ಮತ್ತು ಎಸ್.ಆರ್. ದೀಪು ಅವರು ಈ ಸ್ಥಾನಗಳಲ್ಲಿದ್ದರು. ಇದೇ ಸಂದರ್ಭದಲ್ಲಿ ವಿನಯ್ ಮೃತ್ಯುಂಜಯ ಅವರನ್ನು ಕೆಎಸ್ಸಿಎ ವಕ್ತಾರರನ್ನಾಗಿ ನೇಮಿಸಲಾಯಿತು.
‘ಮಹಿಳಾ ಆಯ್ಕೆ ಸಮಿತಿಯ ನೇಮಕದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ವಿನಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಿತಿಗಳು ಹೀಗಿವೆ:
ಕ್ರಿಕೆಟ್ ಸಲಹಾ ಸಮಿತಿ: ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವಿಜಯ್ ಭಾರದ್ವಾಜ್, ಜಯಶ್ರೀ ದೊರೈಸ್ವಾಮಿ
ಪುರುಷರು: ಸೀನಿಯರ್ ಮತ್ತು 23 ವರ್ಷದೊಳಗಿನವರ ಆಯ್ಕೆ ಸಮಿತಿ: ಅಮಿತ್ ವರ್ಮಾ (ಮುಖ್ಯಸ್ಥ), ಎಸ್. ಪ್ರಕಾಶ್, ತೇಜಪಾಲ್ ಕೊಠಾರಿ, ಸುನಿಲ್ ರಾಜು.
ಜೂನಿಯರ್ ಸಮಿತಿಗಳು (19, 16 ಮತ್ತು 14 ವರ್ಷದವರು): ಜಿ.ಕೆ. ಅನಿಲ್ ಕುಮಾರ್ (ಮುಖ್ಯಸ್ಥ), ಸಿ. ರಾಘವೇಂದ್ರ, ಜಿ.ಎನ್. ಉಮೇಶ್, ಡಿ.ಎಸ್. ಅನಂತ್
ಕೋಚ್(23 ವರ್ಷದೊಳಗಿನ ಪುರುಷರ ತಂಡ): ಗಣೇಶ್ ಸತೀಶ್ ಮತ್ತು ದೀಪಕ್ ಚೌಗುಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.