ಮುಂಬೈ: ದೇಶಿ ಕ್ರಿಕೆಟ್ನಲ್ಲಿ ಅಮೋಘ ಸಾಧನೆ ಮಾಡಿಯೂ ಭಾರತ ತಂಡದಲ್ಲಿ ಆಡುವ ಅವಕಾಶ ಸಿಗದ ಸ್ಪಿನ್ ದಂತಕಥೆ ಪದ್ಮಾಕರ್ ಶಿವಾಳ್ಕರ್ (84) ನಿಧನರಾದರು. ವಯೋಸಹಜವಾದ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು.
ಮುಂಬೈನ ಪದ್ಮಾಕರ್ 124 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಅದರಲ್ಲಿ 19.69ರ ಸರಾಸರಿಯಲ್ಲಿ 589 ವಿಕೆಟ್ಗಳನ್ನು ಗಳಿಸಿದ್ದರು. 1961–62 ರಿಂದ 1987–8ರ ಅವಧಿಯಲ್ಲಿ ಅವರು ಆಡಿದ್ದರು. ಎಡಗೈ ಸ್ಪಿನ್ನರ್ ಆಗಿದ್ದ ಪದ್ಮಾಕರ್ ತಮ್ಮ 22ನೇ ವಯಸ್ಸಿನಲ್ಲಿಯೇ ರಣಜಿ ಟ್ರೋಫಿ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು. ಅಲ್ಲಿಂದ 48 ವರ್ಷ ವಯಸ್ಸಿನವರೆಗೂ ಅವರು ಆಡಿದರು.
ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಅವರು 361 ವಿಕೆಟ್ಗಳನ್ನು ಗಳಿಸಿದರು. ಅದರಲ್ಲಿ 11 ಬಾರಿ ಒಟ್ಟು ಹತ್ತು ವಿಕೆಟ್ಗಳ ಗೊಂಚಲು ಗಳಿಸಿದ್ದರು. 12 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದ ಅವರು 16 ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿ ಕೊಂಡಿದ್ದರು.
2017ರಲ್ಲಿ ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಪ್ರದಾನ ಮಾಡಿತ್ತು.
‘ಮುಂಬೈ ಕ್ರಿಕೆಟ್ ಇವತ್ತು ತನ್ನ ನಿಜವಾದ ದಿಗ್ಗಜನನ್ನು ಕಳೆದುಕೊಂಡಿದೆ. ಪದ್ಮಾಕರ್ ಶಿವಾಳ್ಕರ್ ಅವರು ಕ್ರೀಡೆಗೆ ನೀಡಿದ ಕಾಣಿಕೆಯು ಅಮೂಲ್ಯವಾದದ್ದು. ಅವರು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರು. ಅವರು ಸದಾ ಸ್ಮರಣೀಯರು’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂ.ಸಿ.ಎ) ಅಧ್ಯಕ್ಷ ಅಜಿಂಕ್ಯ ನಾಯಕ ಸ್ಮರಿಸಿದ್ದಾರೆ.
ಪದ್ಮಾಕರ್ ಅವರು ಭಾರತ ತಂಡದಲ್ಲಿ ಆಡುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದರು. ಆದರೆ ಆ ಕಾಲಘಟ್ಟದಲ್ಲಿ ರಾಷ್ಟ್ರೀಯ ತಂಡದಲ್ಲಿ ಖ್ಯಾತನಾಮ ಸ್ಪಿನ್ನರ್ಗಳು ಉತ್ತುಂಗದಲ್ಲಿದ್ದರು. ಅದರಿಂದಾಗಿ ಪದ್ಮಾಕರ್ ಅವಕಾಶವಂಚಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.