ADVERTISEMENT

ಪ್ರತಿ ಬಾರಿ ನಾನ್-ಸ್ಟ್ರೈಕರ್ ಕ್ರೀಸ್ ಬಿಟ್ಟಾಗ 'ಫ್ರೀ ಬಾಲ್' ನೀಡಿ: ಅಶ್ವಿನ್

​ಪ್ರಜಾವಾಣಿ ವಾರ್ತೆ
Published 28 ಮೇ 2021, 12:28 IST
Last Updated 28 ಮೇ 2021, 12:28 IST
ಆರ್. ಅಶ್ವಿನ್
ಆರ್. ಅಶ್ವಿನ್   

ನವದೆಹಲಿ: ಪ್ರತಿ ಬಾರಿಯೂ ಬೌಲಿಂಗ್ ಮಾಡುವ ಮುನ್ನವೇ ನಾನ್-ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟು ರನ್ ಕಬಳಿಸಲು ಯತ್ನಿಸುವಾಗ ಬೌಲರ್‌ಗಳಿಗೆ 'ಫ್ರೀ ಬಾಲ್' ಅನ್ನು ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟ್ಸ್‌ಮನ್ ಸ್ನೇಹಿ ಕ್ರಿಕೆಟ್ ಆಟದಿಂದ 'ಫ್ರೀ ಹಿಟ್' ಕಲ್ಪನೆಯನ್ನು ತೆಗೆದು ಹಾಕಬೇಕು ಎಂಬ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಹೇಳಿಕೆಗೆ ಉತ್ತರವಾಗಿ ಅಶ್ವಿನ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಶ್ವಿನ್, ಫ್ರೀ ಹಿಟ್ ಅತ್ಯುತ್ತಮ ಮಾರ್ಕೆಟಿಂಗ್ ಟೂಲ್ ಆಗಿದ್ದು, ಎಲ್ಲ ಅಭಿಮಾನಿಗಳ ಕಲ್ಪನೆಯನ್ನು ಸೆರೆ ಹಿಡಿದಿದೆ. ನಾನ್-ಸ್ಟ್ರೈಕರ್‌ನಿಂದ ಬ್ಯಾಟ್ಸ್‌ಮನ್ ಬೇಗನೇ ಕ್ರೀಸ್ ಬಿಟ್ಟು ತೆರಳಿದಾಗ ಬೌಲರ್‌ಗಳಿಗೆ 'ಫ್ರೀ ಬಾಲ್' ಸೇರಿಸೋಣ. ಆ ಹೆಚ್ಚುವರಿ ಎಸೆತದಲ್ಲಿ ಬೌಲರ್ ವಿಕೆಟ್ ಪಡೆದಲ್ಲಿ ಆತ ತೆತ್ತ ರನ್‌ಗಳ ಖಾತೆಯಿಂದ ಮತ್ತು ಒಟ್ಟು ಮೊತ್ತದಿಂದ ಹತ್ತು ರನ್ ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ಮಗದೊಂದು ಟ್ವೀಟ್‌ನಲ್ಲಿ ಬೌಲರ್ ಕೈಯಿಂದ ಚೆಂಡು ರಿಲೀಸ್ ಆದ ಬಳಿಕವಷ್ಟೇ ಕ್ರೀಸಿನಿಂದ ಕದಲಬೇಕು ಎಂದು ಬ್ಯಾಟ್ಸ್‌ಮನ್‌ಗಳನ್ನು ಎಚ್ಚರಿಸಿದ್ದಾರೆ.

ಹಿಂದೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವೊಂದರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದ ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು 'ಮಂಕಡಿಂಗ್' ರೀತಿಯಲ್ಲಿ ರನೌಟ್ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.