ADVERTISEMENT

ಸರ್ಕಾರಕ್ಕೆ ತಿಳಿಸದೆ ಪಂದ್ಯ ರದ್ದು: ಸೌರವ್ ಗಂಗೂಲಿ ವಿರುದ್ಧ ಮಮತಾ ಅಸಮಾಧಾನ

ಏಜೆನ್ಸೀಸ್
Published 16 ಮಾರ್ಚ್ 2020, 8:05 IST
Last Updated 16 ಮಾರ್ಚ್ 2020, 8:05 IST
   

ಕೋಲ್ಕತ್ತ:ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳುಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆಡಬೇಕಿದ್ದ ಏಕದಿನ ಪಂದ್ಯವನ್ನು ಸರ್ಕಾರದ ಗಮನಕ್ಕೆ ತರದೆ ರದ್ದು ಮಾಡಿರುವುದಕ್ಕೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್–19 ಭೀತಿಯಿಂದಾಗಿ ಏಕದಿನ ಕ್ರಿಕೆಟ್‌ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳನ್ನು ರದ್ದು ಮಾಡುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿತ್ತು.ರದ್ದಾದ ಪಂದ್ಯಗಳು ಲಖನೌ (ಮಾರ್ಚ್‌ 15) ಹಾಗೂ ಕೋಲ್ಕತ್ತದಲ್ಲಿ (ಮಾರ್ಚ್‌ 18) ಆಯೋಜನೆಗೊಂಡಿದ್ದವು.

ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ADVERTISEMENT

ಕೋಲ್ಕತ್ತ ಪಂದ್ಯದರದ್ದುಸಂಬಂಧ ಮಾತನಾಡಿರುವ ಮಮತಾ, ‘ಸರ್ಕಾರದೊಂದಿಗೆಗಂಗೂಲಿ ಅವರಿಗೆ ಉತ್ತಮ ಸಂಬಂಧವಿದೆ. ಆದರೂ,ಅವರು ನಮಗೆ ಒಂದೇ ಒಂದು ಮಾತು ಹೇಳಿಲ್ಲ. ಕೋಲ್ಕತ್ತದಲ್ಲಿ ಪಂದ್ಯ ಆಯೋಜಿಸಲಾಗಿದೆ ಎಂದ ಮೇಲೆ, ಕೋಲ್ಕತ್ತ ಪೊಲೀಸರಿಗಾದರೂ ಈ ಬಗ್ಗೆ ಮಾಹಿತಿ ನೀಡಬೇಕಿತ್ತು’ ಎಂದಿದ್ದಾರೆ.

‘ನಾನು ಇದನ್ನು ಗೌರವದಿಂದಲೇ ಕೇಳುತ್ತಿದ್ದೇನೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅಥವಾ ಗೃಹ ಇಲಾಖೆ ಕಾರ್ಯದರ್ಶಿ ಇಲ್ಲವೇ ಪೊಲೀಸ್ ಆಯುಕ್ತರು ಅಥವಾ ಸರ್ಕಾರದ ಯಾರೊಬ್ಬರಿಗೂ ಯಾಕೆ ಈ ಬಗ್ಗೆ ಮಾಹಿತಿ ನೀಡಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

‘ನೀವು ನಿರ್ಧಾರ ತೆಗೆದುಕೊಂಡ ನಂತರ ನಮಗೆ ತಿಳಿಸಿದರೆ ಹೇಗೆ? ನೀವು ಈ ಪರಿಸ್ಥಿತಿಯಲ್ಲಿದ್ದರೆ (ನಮ್ಮ ಸ್ಥಿತಿಯಲ್ಲಿ ಇದ್ದಿದ್ದರೆ) ಏನು ಮಾಡುತ್ತಿದ್ದೀರಿ?’ ಎಂದು ಕೇಳಿದ್ದಾರೆ.

ಏಕದಿನ ಸರಣಿ ಮಾತ್ರವಲ್ಲದೆ, ಈ ಐಪಿಎಲ್‌ ಟೂರ್ನಿಯನ್ನೂ ಬಿಸಿಸಿಐ ಮುಂದೂಡಿದೆ.ಇದೇ 29ರಿಂದ ಐಪಿಎಲ್‌ ಆರಂಭವಾಗಬೇಕಿತ್ತು. ಆದರೆ, ಕೋವಿಡ್‌–19ರ ಭೀತಿಯಿಂದಾಗಿ ಮುಂದಿನ ತಿಂಗಳು 15ರ ವರೆಗೆ ಮುಂದೂಡಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಪ್ರಪಂಚದಾದ್ಯಂತ ಸುಮಾರು 1,20,000 ಸಾವಿರ ಜನರಿಗೆ ಸೋಂಕು ಇರುವುದು ದೃಢವಾಗಿದ್ದು, ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಕೋವಿಡ್‌–19ಗೆದೇಶದಲ್ಲಿಯೂ ಇಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.