ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಟ್ಟ ನಾಯಕ ಮನೀಷ್ ಪಾಂಡೆಗೆ ವಿವಾಹ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 11:09 IST
Last Updated 2 ಡಿಸೆಂಬರ್ 2019, 11:09 IST
   

ಮುಂಬೈ: ನಿನ್ನೆಯಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಕರ್ನಾಟಕದ ಮುಡಿಗೇರಿಸಿ ಸಂಭ್ರಮಿಸಿದ್ದ ಮನೀಷ್ ಪಾಂಡೆ, ಇಂದುನಟಿ ಆಶ್ರಿತಾ ಶೆಟ್ಟಿ ಅವರ ಕೈಹಿಡಿದು ಬದುಕಿನ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ.ಮುಂಬೈನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.

ಭಾನುವಾರ ರಾತ್ರಿ ಸೂರತ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ ಪಂದ್ಯ ನಡೆದಿತ್ತು. ಪಂದ್ಯ ಗೆದ್ದ ಬಳಿಕ ಬಳಿಕ ಮಾತನಾಡಿದ್ದ ಮನೀಷ್‌, ‘ನಾನು ವಿಂಡೀಸ್‌ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಆದರೆ, ಅದಕ್ಕೂ ಮೊದಲು ನನಗೆ ತುಂಬಾ ಮುಖ್ಯವಾದ ಇನ್ನೊಂದು ಸರಣಿ ಇದೆ. ನಾನು ನಾಳೆ ಮದುವೆಯಾಗುತ್ತಿದ್ದೇನೆ’ ಎಂದು ಸಂತಸಹಂಚಿಕೊಂಡಿದ್ದರು.

ಪಂದ್ಯದಲ್ಲಿಟಾಸ್‌ ಸೋತರೂ,ಮೊದಲು ಬ್ಯಾಟಿಂಗ್‌ ಮಾಡಿದ್ದ ಕರ್ನಾಟಕ ಬ್ಯಾಟಿಂಗ್‌ ವಿಭಾಗಕ್ಕೆ ನಾಯಕ ಮನೀಷ್‌ ಬಲ ತುಂಬಿದ್ದರು. ಅನುಭವಿ ಕೆ.ಎಲ್‌.ರಾಹುಲ್‌(22) ಹಾಗೂ ಮಯಂಕ್‌ ಅಗರವಾಲ್‌(0) ನಿರ್ಗಮನದ ಬಳಿಕ ಎರಡು ಉತ್ತಮ ಜೊತೆಯಾಟಗಳನ್ನು ಆಡಿ ನೆರವಾಗಿದ್ದರು.ಮೂರನೇ ವಿಕೆಟ್‌ಗೆ ದೇವದತ್‌ ಪಡಿಕ್ಕಲ್‌ ಜೊತೆ 48 ಹಾಗೂ ರೋಹನ್‌ ಕದಂ ಜೊತೆ ನಾಲ್ಕನೇ ವಿಕೆಟ್‌ಗೆ 65ರನ್‌ ಸೇರಿಸಿದ್ದರು.

ADVERTISEMENT

ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಮನೀಷ್‌, 45 ಎಸೆತಗಳಲ್ಲಿ 60ರನ್‌ ಗಳಿಸಿದ್ದರು. ಇದರ ಬಲದಿಂದ ಕರ್ನಾಟಕ ತಂಡ 180ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಈ ಗುರಿಯೆದುರು ಕೊನೆಯವರೆಗೂ ಹೋರಾಡಿದ ತಮಿಳುನಾಡು 179ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ತಮಿಳುನಾಡು ತಂಡ ಕೇವಲ ಒಂದು ರನ್‌ ಅಂತರದಿಂದ ಸೋಲು ಕಂಡರೆ, ಸತತ ಎರಡು ಬಾರಿ ಈ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಯಿತು.

ಸದ್ಯ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ 30 ವರ್ಷದ ಮನೀಷ್, ಭಾರತ ತಂಡವನ್ನು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಮನೀಷ್‌ ಮಡದಿಯಾಗಿರುವಆಶ್ರಿತಾ ತಮಿಳು ಸಿನಿಮಾ ನಟಿ ಎನ್ನಲಾಗಿದ್ದು, ಸಿದ್ದಾರ್ಥ್‌ ನಟನೆಯ ಉದಯಂ ಎನ್‌ಎಚ್‌4 ಸಿನಿಮಾ ಬಳಿಕ ಖ್ಯಾತಿ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.