ADVERTISEMENT

Border-Gavaskar Trophy: ಬೂಮ್ರಾ ಬೌಲಿಂಗ್‌ಗೆ ಗ್ಲೆನ್ ಮೆಕ್‌ಗ್ರಾ ಅಭಿಮಾನಿ

ಭಾರತದ ವೇಗಿಯ ಬಗ್ಗೆ ಮೆಚ್ಚುಗೆ ಮಳೆಗರೆದ ಆಸ್ಟ್ರೇಲಿಯಾ ದಿಗ್ಗಜ

ಮಧು ಜವಳಿ
Published 1 ಜನವರಿ 2025, 23:30 IST
Last Updated 1 ಜನವರಿ 2025, 23:30 IST
<div class="paragraphs"><p>ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾ ಆವರು ತಮ್ಮ ಫೌಂಡೇಷನ್ ಮೂಲಕ ಆಯೋಜಿಸಲಾದ ಕ್ಯಾನ್ಸರ್‌ ಜಾಗೃತಿ ಅಭಿಯಾನದ ಅಂಗವಾಗಿ ಪ್ರಸ್ತುತ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಪಿಂಕ್ ಕ್ಯಾಪ್ ನೀಡಿದರು&nbsp; </p></div>

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾ ಆವರು ತಮ್ಮ ಫೌಂಡೇಷನ್ ಮೂಲಕ ಆಯೋಜಿಸಲಾದ ಕ್ಯಾನ್ಸರ್‌ ಜಾಗೃತಿ ಅಭಿಯಾನದ ಅಂಗವಾಗಿ ಪ್ರಸ್ತುತ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಪಿಂಕ್ ಕ್ಯಾಪ್ ನೀಡಿದರು 

   

–ಎಎಫ್‌ಪಿ ಚಿತ್ರ

ಮೆಲ್ಬರ್ನ್: ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಇದುವರೆಗೆ ಅಮೋಘವಾಗಿ ಬೌಲಿಂಗ್ ಮಾಡಿದ್ದಾರೆ. 

ADVERTISEMENT

ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2–1ರಿಂದ ಮುನ್ನಡೆ ಸಾಧಿಸಿದೆ. ಕೊನೆಯ ಮತ್ತು ಐದನೇ ಪಂದ್ಯವು ಸಿಡ್ನಿಯಲ್ಲಿ  ಶುಕ್ರವಾರ ಆರಂಭವಾಗಲಿದ್ದು, 2–2ರ ಸಮಬಲ ಸಾಧಿಸುವತ್ತ ಭಾರತ ಚಿತ್ತ ನೆಟ್ಟಿದೆ. ಫಲಿತಾಂಶ ಏನೇ ಬರಲಿ; ಆದರೆ ಬೂಮ್ರಾ ಮಾತ್ರ ಮನ ಗೆದ್ದಿದ್ದಾರೆ. ಮನಸೋತವರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾ ಕೂಡ ಇದ್ದಾರೆ.  'ನಾನು ಬೂಮ್ರ ಅವರ ಅಭಿಮಾನಿಯಾಗಿಬಿಟ್ಟಿದ್ದೇನೆ’ ಎಂದು ಗ್ಲೆನ್ ಹೇಳಿದ್ದಾರೆ. 

‘ಬೂಮ್ರಾ ಅವರು ಇರದೇ ಹೋಗಿದ್ದರೆ, ಈ ಸರಣಿಯು (ಆಸ್ಟ್ರೇಲಿಯಾ ಪಾರಮ್ಯ) ಏಕಪಕ್ಷೀಯವಾಗಿರುತ್ತಿತ್ತು’ ಎಂದು ಮೆಕ್‌ಗ್ರಾ ಅಭಿಪ್ರಾಯಪಟ್ಟಿದ್ದಾರೆ. 

ಅವರು ಇಲ್ಲಿ ತಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 2008ರಲ್ಲಿ ಗ್ಲೆನ್ ಪತ್ನಿ ಜೇನ್ ಅವರು ಕ್ಯಾನ್ಸರ್‌ ಕಾಯಿಲೆಗೆ ಬಲಿಯಾಗಿದ್ದರು. ಆಗ ಗ್ಲೆನ್ ಫೌಂಡೇಷನ್ ಆರಂಭಿಸಿ ಜಾಗೃತಿ ಮೂಡಿಸುತ್ತಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೂಮ್ರಾ  ವಿಶಿಷ್ಟ ಶೈಲಿಯ ಬೌಲರ್. ಅವರ ಶೈಲಿಯನ್ನು ಯುವ ಆಟಗಾರರಿಗೆ ಹೇಳಿಕೊಡುವುದು ಕಷ್ಟ. ಆದರೆ ಅಂತಹ ಶೈಲಿಯನ್ನು ಅವರು (ಬೂಮ್ರಾ) ಸರಾಗವಾಗಿ ಪ್ರಯೋಗಿಸುತ್ತಾರೆ. ವಿಸ್ಮಯಕಾರಿ ಬೌಲರ್ ಅವರು ’ ಎಂದರು. 

‘ತಮ್ಮ ರನ್‌ ಅಪ್‌ನ ಕೊನೆಯ ಕೆಲವೇ ಹೆಜ್ಜೆಗಳಲ್ಲಿ ಅವರು ಅಪಾರ ಪ್ರಮಾಣದಲ್ಲಿ ಶಕ್ತಿಯನ್ನು ಸಂಚಯ ಮಾಡಿಕೊಂಡು ಚೆಂಡು ಬಿಡುಗಡೆಗೊಳಿಸುವ ರೀತಿ ಅಮೋಘವಾಗಿದೆ. ಅವರು  ವಿಕೆಟ್‌ನ ಎರಡೂ ಕಡೆಯಿಂದ ಚೆಂಡು ಪ್ರಯೋಗಿಸುವುದರ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದಾರೆ. ಅವರ ಅಂಕಿ ಸಂಖ್ಯೆಗಳು ಅದ್ಭುತವಾಗಿವೆ. ಅದಕ್ಕಾಗಿಯೇ ನಾನು ಅವರ ಅಭಿಮಾನಿಯಾಗಿರುವೆ’ ಎಂದರು. 

ಭಾರತ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಕುರಿತು ಮಾತನಾಡಿದ ಅವರು, ‘ಭಾರತವೆಂದರೆ 140 ಕೋಟಿ ಜನಸಂಖ್ಯೆಯಿರುವ ಮತ್ತು ಅಪ್ಪಟ ಕ್ರಿಕೆಟ್ ಪ್ರೇಮಿಗಳ ದೇಶ. ಈ ಆಟವು ಅವರ ಸಂಸ್ಕೃತಿಯ ಭಾಗವೇ ಆಗಿಬಿಟ್ಟಿದೆ. ಒಂದು ತುಂಡು ಜಾಗ ಸಿಕ್ಕಿದರೂ ಕ್ರಿಕೆಟ್ ಆಡಲು ಆರಂಭಿಸುತ್ತಾರೆ. ಅವರ ಆಸಕ್ತಿಯನ್ನು ಕಣ್ನಾರೆ ಕಂಡಿದ್ದೇನೆ. ಪೇಸ್ ಫೌಂಡೇಷನ್‌ನಲ್ಲಿ ಕೆಲಸ ಮಾಡುವಾಗ ನೋಡಿರುವೆ. ಪ್ರಸಿದ್ಧಕೃಷ್ಣ ಪ್ರತಿಭಾನ್ವಿತ ಬೌಲರ್. ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಬಲ್ಲರು’ ಎಂದರು. 

‘ಈಗಿನ ಯುವಪೀಳಿಗೆಯ ಮನೋಭಾವ ವಿಭಿನ್ನವಾಗಿದೆ. ಅವರು ಯಾವುದಕ್ಕೂ ಹೆದರುವುದಿಲ್ಲ. ಎಂತಹದೇ ಸ್ಥಿತಿಯಲ್ಲಿಯೂ ಅವರು ದಿಟ್ಟವಾಗಿ ಆಡುತ್ತಾರೆ. ಅವರ ಆ ಗುಣವೇ ನನಗೆ ಅಪಾರ ಇಷ್ಟ.  ಆಸ್ಟ್ರೇಲಿಯಾ ತಂಡದಲ್ಲಿರುವ ಸ್ಯಾಮ್ ಕೊನ್‌ಸ್ಟಸ್ ಕೂಡ ಅದೇ ರೀತಿಯ ಹುಡುಗ. ಭಾರತ ತಂಡದಲ್ಲಿ ಯುವ ಆಟಗಾರರಿಗೆ ಕೊರತೆ ಇಲ್ಲ’ ಎಂದು ಹೇಳಿದರು.

ಆಟಗಾರರೊಂದಿಗೆ ಪ್ರಧಾನಿ ಸಂವಾದ

ಸಿಡ್ನಿ: ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರೊಂದಿಗೆ ಬುಧವಾರ ಆಸ್ಟ್ರೇಲಿಯಾ ಪ್ರಧಾನಿ ಅಂತೋನಿ ಅಲ್ಬನೀಸ್ ಅವರು ಸಂವಾದ ನಡೆಸಿದರು.

ಅವರು ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. 

‘ಭಾರತ ಮತ್ತು ಆಸ್ಟ್ರೇಲಿಯಾ ತಂಡವು ಈ ಬೇಸಿಗೆಯಲ್ಲಿ ಉತ್ತಮವಾದ ಕ್ರಿಕೆಟ್ ರಸದೌತಣವನ್ನು ನೀಡಿವ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.