ನವದೆಹಲಿ: ನಿವೃತ್ತರಾದ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನ ಅಭಿಮಾನದ ಮಾತುಗಳನ್ನಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ಒಳಗೊಂಡ ವಿಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
‘ಧೋನಿ ಅವರು ಪ್ರೇರಕ ಶಕ್ತಿಯೂ ಒಂದು ಸಂಸ್ಥೆಯೂ ಆಗಿದ್ದಾರೆ’ ಎಂದು ಮಿಥಾಲಿ ಹೇಳಿದ್ದಾರೆ. ‘ಧೋನಿ ಈಗ ಎಲ್ಲರ ಕಣ್ಮಣಿ. ಕ್ರೀಡಾಪಟು ಆಗಲು ಬಯಸುವ ಸಣ್ಣ ಪಟ್ಟಣದ ಸಾಮಾನ್ಯ ಹುಡುಗರು ಕೂಡ ಧೋನಿಯಂತಾಗಲು ಬಯಸುತ್ತಾರೆ. ಎಲ್ಲರ ಗೌರವ ಪಡೆದಿರುವ, ಖ್ಯಾತಿ ಹೊಂದಿರುವ, ಜನರ ಒಲವು ಗಳಿಸಿರುವ ಧೋನಿ ಅವರ ಸರಳ ನಡೆ ಮತ್ತು ಕಠಿಣ ಪರಿಸ್ಥಿತಿ ನಿಭಾಯಿಸುವ ವಿಧಾನ ಅನುಕರಣೀಯ’ ಎಂದು ಮಿಥಾಲಿ ಹೇಳಿದ್ದಾರೆ.
’ಯಾವುದೇ ಕ್ರಿಕೆಟ್ ಬುಕ್ನಲ್ಲಿ ಕಾಣಲು ಸಾಧ್ಯವಿಲ್ಲದ ಹೆಲಿಕಾಪ್ಟರ್ ಶಾಟ್, ಧೋನಿ ಅವರದೇ ವೈಶಿಷ್ಟ್ಯ. ಅದು ಅವರ ಸ್ವಂತಿಕೆ, ಪ್ರತಿಭೆ ಮತ್ತು ಆತ್ಮವಿಶ್ವಾಸದ ಸಂಕೇತ. ಅವರಂಥವರು ಮತ್ತೆ ಬರಲು ಸಾಧ್ಯವಿಲ್ಲ. ಅವರು ನಿಜಕ್ಕೂ ಕ್ರಿಕೆಟ್ನ ದಿಗ್ಗಜ’ ಎಂದು ಅವರು ಹೇಳಿದ್ದಾರೆ.
‘2011ರ ವಿಶ್ವಕಪ್ ಫೈನಲ್ ಪಂದ್ಯದ ನಿರ್ಣಾಯಕ ಹಂತದಲ್ಲಿ ಧೋನಿ ಸರ್ ಕ್ರೀಸ್ಗೆ ತೆರಳಿದಾಗ ಅವರ ಮುಖದಲ್ಲಿದ್ದ ವಿಶ್ವಾಸವು ನನಗೆ ತುಂಬ ಪ್ರೇರಣೆಯಾಯಿತು’ ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.