ADVERTISEMENT

IPL-2020: ಮುಂಬೈ–ಚೆನ್ನೈ ಹಣಾಹಣಿ

ರೋಹಿತ್ ಶರ್ಮಾ – ಮಹೇಂದ್ರಸಿಂಗ್ ಧೋನಿ ಮುಖಾಮುಖಿ ಇಂದು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 20:30 IST
Last Updated 22 ಅಕ್ಟೋಬರ್ 2020, 20:30 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   
""

ಶಾರ್ಜಾ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ಸದ್ಯದ ಪರಿಸ್ಥಿತಿಯಲ್ಲಿ ಅಂಕಪಟ್ಟಿಯ ತಳಕ್ಕೆ ಜಾರಿದೆ. ಅವತ್ತು ಸೋತಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ ಹೊಸ್ತಿಲಿಗೆ ಬಂದು ನಿಂತಿದೆ.

ಈ ಎರಡೂ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ. ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿರುವ ಮುಂಬೈ ಆರರಲ್ಲಿ ಗೆ್ದು, ಮೂರರಲ್ಲಿ ಸೋತಿದೆ. ಆದರೆ ಮಹೇಂದ್ರಸಿಂಗ್ ಧೋನಿ ಬಳಗವು ಹತ್ತು ಪಂದ್ಯಗಳನ್ನು ಆಡಿ ಮೂರು ಗೆದ್ದು, ಏಳರಲ್ಲಿ ಸೋತಿದೆ. ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

ಹೋದ ಪಂದ್ಯದ ಸೋಲಿನ ನಂತರದ ಮಾತನಾಡಿದ್ದ ಧೋನಿ, ’ಯುವ ಆಟಗಾರರಲ್ಲಿ ಜಯದ ತುಡಿತ (ಕಿಡಿ) ಕಾಣುತ್ತಿಲ್ಲ. ಮುಂದಿನ ಪಂದ್ಯಗಳಲ್ಲಿ ಹೆಚ್ಚು ಒತ್ತಡ ಇರುವುದಿಲ್ಲ. ಆದ್ದರಿಂದ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಾಗುವುದು‘ ಎಂದಿದ್ದರು. ಅವರ ಈ ಮಾತು ಬಹಳಷ್ಟು ಜನರಿಂದ ಟೀಕೆಗೆ ಗುರಿಯಾಗಿತ್ತು.

ADVERTISEMENT

ಆದ್ದರಿಂದ ಈ ಪಂದ್ಯದಲ್ಲಿ ಎನ್. ಜಗದೀಶನ್ ಮತ್ತು ಇತರ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕೇದಾರ್ ಜಾಧವ್, ಅಂಬಟಿ ರಾಯುಡು ಅವರಂತಹ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಬಹುದು.

ಆದರೆ ಬೌಲಿಂಗ್‌ನಲ್ಲಿ ದೀಪಕ್ ಚಾಹರ್. ಸ್ಯಾಮ್ ಕರನ್, ಕರ್ಣ ಶರ್ಮಾ ಅವರು ಉತ್ತಮ ಲಯದಲ್ಲಿದ್ದಾರೆ. ತಂಡದ ಸಮಾಧಾನಕರ ಗೆಲುವಿಗೆ ಪ್ರಯತ್ನಿಸುವ ಸಾಮರ್ಥ್ಯ ಅವರಿಗೆ ಇದೆ.

ಆದರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿ ಬೆಳೆದಿದೆ. ಬ್ಯಾಟಿಂಗ್‌ನಲ್ಲಿ ಎಂಟು ಮಂದಿ ರನ್‌ ಹರಿಸುವ ಸಾಮರ್ಥ್ಯ ಹೊಂದಿದ್ದಾರೆ.ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ ಅವರ ಮೋಡಿ ಮುಂದುವರಿದಿದೆ.

ಹೋದ ಪಂದ್ಯದಲ್ಲಿ ಮುಂಬೈ ’ಡಬಲ್ ಸೂಪರ್ ಓವರ್‌‘ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೋತಿತ್ತು. ಇದು ಮುಂಬೈ ತಂಡದ ಜಿದ್ದಾಜಿದ್ದಿನ ಹೋರಾಟಕ್ಕೊಂದು ನಿದರ್ಶನ. ಆದ್ದರಿಂದ ಚೆನ್ನೈ ಅಂಕಪಟ್ಟಿಯಲ್ಲಿ ತುಸು ಮೇಲೆರಬೇಕಾದರೆ ಮುಂಬೈ ಎದುರು ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಸವಾಲು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.