ADVERTISEMENT

ವಿರಾಟ್‌ಗೆ ಸಹಕರಿಸುವುದು ನನ್ನ ಕೆಲಸ: ಅಜಿಂಕ್ಯ ರಹಾನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 14:36 IST
Last Updated 3 ಫೆಬ್ರುವರಿ 2021, 14:36 IST
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ   

ಚೆನ್ನೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ತಮಗೆ ಅತ್ಯಂತ ಸುಲಭವಾದ ಹೊಣೆ ಇದೆ. ವಿರಾಟ್ ಕೊಹ್ಲಿಗೆ ನೆರವಾಗುವುದು ಪ್ರಮುಖ ಕೆಲಸ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಅಜಿಂಕ್ಯ ರಹಾನೆ ಹೇಳಿದರು.

ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ವಿರಾಟ್ ನನಗೆ ಯಾವುದೇ ವಿಷಯದ ಬಗ್ಗೆ ಕೇಳಿದರೂ ಗೊತ್ತಿರುವುದನ್ನು ಹೇಳುತ್ತೇನೆ. ಕೌಟುಂಬಿಕ ಕಾರಣಗಳಿಗಾಗಿ ವಿರಾಟ್ ಅವರು ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ್ದರು. ಆಗ ನಾನು ತಂಡವನ್ನು ಮುನ್ನಡೆಸಿದ್ದೆ‘ ಎಂದರು.

'ಆಸ್ಟ್ರೇಲಿಯಾದ ಸಾಧನೆ ಮತ್ತು ಪ್ರವಾಸಗಳು ಮುಗಿದು ಹೋಗಿರುವ ಅಧ್ಯಾಯ. ಈಗ ಮುಂಬರುವ ಇಂಗ್ಲೆಂಡ್ ಎದುರಿನ ಸರಣಿಗೆ ಸಿದ್ಧವಾಗಿದ್ದೇವೆ. ಅವರು ಕೂಡ ಶ್ರೀಲಂಕಾದಲ್ಲಿ ಜಯಗಳಿಸಿ ಇಲ್ಲಿಗೆ ಬಂದಿ್ದ್ದಾರೆ. ಉತ್ತಮ ತಂಡವಾಗಿರುವ ಪ್ರವಾಸಿ ಬಳಗದ ಎದುರು ಶ್ರೇಷ್ಠ ದರ್ಜೆಯ ಕ್ರಿಕೆಟ್ ಆಡುವುದು ನಮ್ಮ ಧ್ಯೇಯ‘ ಎಂದು ಮುಂಬೈಕರ್ ಪ್ರತಿಕ್ರಿಯಿಸಿದರು.

ADVERTISEMENT

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಿಸಲು ಭಾರತ ತಂಡವು ಈ ಸರಣಿಯಲ್ಲಿ ಜಯಿಸುವುದು ಮುಖ್ಯವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಹಾನೆ, ’ಫೈನಲ್ ಪಂದ್ಯಕ್ಕೆ ಇನ್ನೂ ಮೂರ್ನಾಲ್ಕು ತಿಂಗಳುಗಳು ಬಾಕಿ ಇವೆ. ಸದ್ಯ ನಮ್ಮ ಮುಂದಿರುವ ಸವಾಲನ್ನು ಎದುರಿಸುವತ್ತ ನಮ್ಮ ಗಮನವಿದೆ. ಪ್ರಸ್ತುತ ಈ ಸರಣಿಯಲ್ಲಿ ಚೆನ್ನಾಗಿ ಆಡುವ ಕುರಿತು ನಾವು ಯೋಚಿಸುತ್ತೇವೆ. ನ್ಯೂಜಿಲೆಂಡ್ ತಂಡವು ಉತ್ತಮವಾಗಿ ಆಡಿತ್ತು. ಅವರು ಫೈನಲ್ ಪ್ರವೇಶಿಸಿದ್ದು ಸೂಕ್ತವಾಗಿದೆ‘ ಎಂದು ರಹಾನೆ ಅಭಿಪ್ರಾಯಪಟ್ಟರು.

’ಪಂದ್ಯದಲ್ಲಿ ಆಡುವ ಹನ್ನೊಂದು ಆಟಗಾರರ ಬಳಗವನ್ನು ಗುರುವಾರದ ಅಭ್ಯಾಸದ ನಂತರ ನಿರ್ಧರಿಸಲಾಗುವುದು‘ ಎಂದರು.

’ಭಾರತದ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವಾಗುವುದು ಸಹಜ. ನಮ್ಮಲ್ಲಿರುವ ಸ್ಪಿನ್ ಸಾಮರ್ಥ್ಯವನ್ನು ಬಳಸಿಕೊಳ್ಳುವ ಯೋಜನೆ ಇದೆ‘ ಎಂದಷ್ಟೇ ಹೇಳಿದರು.

ಹೋದ ತಿಂಗಳು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿದ್ದ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.