ADVERTISEMENT

ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಸಿಸಿಐ ನೋಡಿಕೊಳ್ಳಲಿದೆ: ಗಂಗೂಲಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 13:01 IST
Last Updated 16 ಡಿಸೆಂಬರ್ 2021, 13:01 IST
ಸೌರವ್ ಗಂಗೂಲಿ 
ಸೌರವ್ ಗಂಗೂಲಿ    

ಕೋಲ್ಕತ್ತ (ಪಿಟಿಐ): ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಬದಲಾವಣೆ ಕುರಿತು ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಯ ಕುರಿತು ವೈಯಕ್ತಿಕವಾಗಿಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದರ ಬಗ್ಗೆಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ನೋಡಿಕೊಳ್ಳಲಿದೆ ಎಂದು ಬಿಸಿಸಿಐಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್, ತಮ್ಮನ್ನು ಏಕದಿನ ತಂಡದ ನಾಯಕತ್ವದಿಂದ ಕೈಬಿಡುವ ಕುರಿತು ಮಂಡಳಿಯು ಕೇವಲ 90 ನಿಮಿಷಗಳ ಮುನ್ನ ಸಂಪರ್ಕಿಸಿತ್ತು ಎಂದು ಹೇಳಿದ್ದರು. ಈ ಹಿಂದೆ ಗಂಗೂಲಿ ನೀಡಿದ್ದ ಹೇಳಿಕೆಗೆ ಕೊಹ್ಲಿಯ ಮಾತುಗಳು ತದ್ವಿರುದ್ಧವಾಗಿದ್ದವು. ಇದೀಗ ಸಾಮಾಜಿಕ ಜಾಲತಾಣ ಮತ್ತು ಕ್ರಿಕೆಟ್ ವಲಯದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ತಮ್ಮನ್ನು ಸಂಪರ್ಕಿಸಿದ ಸ್ಥಳೀಯ ಮಾಧ್ಯಮಗಳಿಗೆ ಗಂಗೂಲಿ, ‘ಯಾವುದೇ ಹೇಳಿಕೆ ಕೊಡುವುದಿಲ್ಲ. ಪ್ರಕಟಣೆಯನ್ನೂ ನೀಡುವುದಿಲ್ಲ ಮತ್ತು ಸುದ್ದಿಗೋಷ್ಠಿಯನ್ನೂ ಮಾಡುವುದಿಲ್ಲ. ಬಿಸಿಸಿಐಗೇ ಇದನ್ನು ಬಿಟ್ಟುಬಿಡುತ್ತೇನೆ’ ಎಂದರು.

ADVERTISEMENT

‘ನಾನು ಟಿ20 ನಾಯಕತ್ವವನ್ನು ಬಿಡಲು ನಿರ್ಧರಿಸಿದಾಗ ಮೊಟ್ಟಮೊದಲಿಗೆ ಮಂಡಳಿಗೆ ವಿಷಯ ತಿಳಿಸಿದ್ದೆ. ನನ್ನ ತೀರ್ಮಾನದ ಕುರಿತು ಅವರಿಗೆ (ಪದಾಧಿಕಾರಿಗಳಿಗೆ) ಕೂಲಂಕಷವಾಗಿ ಅರುಹಿದ್ದೆ. ನಾಯಕತ್ವ ಬಿಡಲು ಕಾರಣಗಳನ್ನೂ ಸ್ಪಷ್ಟಪಡಿಸಿದ್ದೆ’ ಎಂದು ಕೊಹ್ಲಿ ತಿಳಿಸಿದ್ದರು.

ಆದರೆ ಈಚೆಗೆ ಮಾತನಾಡಿದ್ದ ಗಂಗೂಲಿ, ‘ಕೊಹ್ಲಿಗೆ ಟಿ20 ನಾಯಕತ್ವ ಬಿಡದಿರಲು ಹೇಳಿದ್ದೆವು. ಏಕದಿನ ನಾಯಕತ್ವ ಬದಲಾವಣೆಯ ಕುರಿತು ಅವರೊಂದಿಗೆ ನಾವು ಮಾತನಾಡಿದ್ದೆವು. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಕೂಡ ಮಾತನಾಡಿದ್ದರು. ಬಿಳಿಚೆಂಡಿನ ಕ್ರಿಕೆಟ್ ವಿಭಾಗಕ್ಕೆ ಒಬ್ಬರೇ ನಾಯಕರಿರುವುದು ಉತ್ತಮವೆಂಬ ಕಾರಣದಿಂದ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿದೆ’ ಎಂದಿದ್ದರು.

ಕೊಹ್ಲಿಯ ಹೇಳಿಕೆಯ ಕುರಿತು ಗಂಗೂಲಿ ಪ್ರತಿಕ್ರಿಯೆ ನೀಡಬೇಕು. ಗೊಂದಲದ ವಾತಾವರಣ ನಿವಾರಿಸಬೇಕು ಎಂದು ಗುರುವಾರ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.