ADVERTISEMENT

IPL 2020| ತಂಡದಲ್ಲಿ ಆ ಇಬ್ಬರು ಆಟಗಾರರು ಇದ್ದಿದ್ದರೆ? ಸಿಎಸ್‌ಕೆ ಕನವರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2020, 3:54 IST
Last Updated 26 ಸೆಪ್ಟೆಂಬರ್ 2020, 3:54 IST
ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ಧೋನಿ
ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ಧೋನಿ    

ದುಬೈ: ಸತತ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಅಂಬಟಿರಾಯುಡು ಮತ್ತು ಸುರೇಶ್‌ ರೈನಾ ಅವರ ಕನವರಿಕೆ ಆರಂಭವಾಗಿದೆ.

'ಅಂಬಟಿ ರಾಯುಡು ಅನುಪಸ್ಥಿತಿಯಿಂದಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಉತ್ಸಾಹ ಕಾಣಿಸುತ್ತಿಲ್ಲ,’ ಎಂದು ಸ್ವತಃ ನಾಯಕ ಮಹೇಂದ್ರ ಸಿಂಗ್‌ ಧೋನಿ ಒಪ್ಪಿಕೊಂಡಿದ್ದಾರೆ.

‘ನಾವು ಪ್ರಮುಖ ಆಟಗಾರರ ಅನುಪಸ್ಥಿತಿ ಅನುಭವಿಸುತ್ತಿದ್ದೇವೆ. ನಮ್ಮ ಬ್ಯಾಟಿಂಗ್‌ ಲೈನ್‌ ಅಪ್‌ ಅಂಬಟಿ ರಾಯುಡು ಮತ್ತು ಸುರೇಶ್‌ ಅವರಿಂದ ಹೊರತಾಗಿದೆ,’ ಎಂದು ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದ್ದಾರೆ.

ADVERTISEMENT

ಈ ಐಪಿಎಲ್‌ ಋತುಮಾನದ ಮೂರನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶುಕ್ರವಾರ ಆಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಚೇಸ್‌ ಮಾಡಲಾಗದೇ ಪರದಾಡಿತು. ಅಂತಿಮವಾಗಿ ಡೆಲ್ಲಿ ವಿರುದ್ಧ 44 ರನ್‌ಗಳ ಸೋಲು ಅನಭುವಿಸಿತು. ಫಾಫ್‌ ಡುಪ್ಲೆಸಿಸ್‌–43, ಕೇಧಾರ್‌ ಜಾದವ್–26 ಹೊರತುಪಡಿಸಿ ಬೇರೆ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ. ಸ್ವತಃ ನಾಯಕ ಧೋನಿ ಕೇವಲ 15 ರನ್‌ ಗಳಿಸಿ ಔಟಾದರು. ಇದು ತಂಡದ ಬ್ಯಾಟಿಂಗ್‌ ವೈಫಲ್ಯವನ್ನು ಎತ್ತಿ ತೋರಿಸುತ್ತಿತ್ತು.

‘ನಾವು ಸ್ಪಷ್ಟತೆ ಮರಳಬೇಕಾಗಿದೆ. ಉತ್ತಮ ಬ್ಯಾಟಿಂಗ್‌ ಸಂಯೋಜನೆಯನ್ನು ಎದುರು ನೋಡುತ್ತಿದ್ದೇವೆ. ಬಹುಶಃ, ಮುಂದಿನ ಪಂದ್ಯದಲ್ಲಿ ರಾಯಡು ಹಿಂತಿರುಗಿದರೆ ತಂಡದಲ್ಲಿ ಸಮತೋಲನವು ಉತ್ತಮಗೊಳ್ಳುತ್ತದೆ‘ ಎಂದು ಮಹೇಂದ್ರ ಸಿಂಗ್‌ ಧೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಐದು ವಿಕೆಟ್‌ಗಳ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ರಾಯುಡು 48 ಎಸೆತಗಳಲ್ಲಿ 71 ರನ್ ಗಳಿಸಿ, ತಂಡದ ಜಯಕ್ಕೆ ಪ್ರಧಾನ ಕೊಡುಗೆ ನೀಡಿದ್ದರು. ಆದರೆ, ಬಲಗೈ ಆಟಗಾರ ರಾಯುಡು ಮಂಡಿ ಗಾಯದಿಂದಾಗಿ ಪಂದ್ಯಗಳಿಂದ ದೂರ ಉಳಿದಿದ್ದಾರೆ.

ಇನ್ನು, ಸುರೇಶ್‌ ರೈನಾ ಅವರು ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.