
ಸಲ್ಮಾನ್ ಅಲಿ ಆಘಾ –
ಎಕ್ಸ್ ಚಿತ್ರ
ಕರಾಚಿ: ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರಕ್ಕೆ ಸಂಬಂಧಿಸಿ ಸರ್ಕಾರ ಅಥವಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೀಡುವ ನಿರ್ದೇಶನವನ್ನು ಆಟಗಾರರು ಪಾಲಿಸಲಿದ್ದಾರೆ ಎಂದು ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಸೋಮವಾರ ಹೇಳಿದ್ದಾರೆ.
ನೆರೆಯ ದೇಶಗಳ ನಡುವಣ ಇದೇ ತಿಂಗಳ 15ರಂದು ಕೊಲಂಬೊದಲ್ಲಿ ಈ ಬಹುನಿರೀಕ್ಷಿತ ಪಂದ್ಯ ನಿಗದಿಯಾಗಿತ್ತು.
ತಂಡ ಕೊಲಂಬೊಕ್ಕೆ ನಿರ್ಗಮಿಸುವ ಮೊದಲು ಲಾಹೋರ್ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್, ‘ಆಸ್ಟ್ರೇಲಿಯಾ ಎದುರಿನ ಟಿ20 ಪಂದ್ಯದ ತಕ್ಷಣ ತಂಡದ ಮ್ಯಾನೇಜರ್ ಅವರು ಸರ್ಕಾರ ತೆಗೆದುಕೊಂಡ ತೀರ್ಮಾನದ ಬಗ್ಗೆ ಆಟಗಾರರಿಗೆ ಮಾಹಿತಿ ನೀಡಿದರು’ ಎಂದರು.
‘ನಾವು ಮಂಡಳಿ ಜೊತೆ ಗುತ್ತಿಗೆಯಲ್ಲಿರುವ ಆಟಗಾರರು. ಸರ್ಕಾರ ಅಥವಾ ಮಂಡಳಿ ನಿರ್ಧಾರಕ್ಕೆ ಆಟಗಾರರೆಲ್ಲರೂ ಬದ್ಧರಾಗಿರುತ್ತಾರೆ’ ಎಂದರು.
‘ಟಿ20 ವಿಶ್ವಕಪ್ ಕೇವಲ ಭಾರತ ವಿರುದ್ಧ ಆಡುವುದಕ್ಕಷ್ಟೇ ಸಂಬಂಧಿಸಿಲ್ಲ. ನಾವು ಶ್ರೀಲಂಕಾಕ್ಕೆ ತೆರಳಲಿದ್ದು ಅಲ್ಲಿ ನಡೆಯಲಿರುವ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ನಮಗೆ ಇತರ ಮೂರು ಲೀಗ್ ಪಂದ್ಯಗಳಿವೆ. ಅದನ್ನು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಯತ್ನಿಸುತ್ತೇವೆ’ ಎಂದು ಸಲ್ಮಾನ್ ಹೇಳಿದರು.
ಹಿರಿಯರ ಬೆಂಬಲ:
ತಂಡದ ಮಾಜಿ ನಾಯಕರಾದ ಶಾಹಿದ್ ಅಫ್ರಿದಿ, ಮುಹಮ್ಮದ್ ಯೂಸುಫ್ ಮತ್ತು ರಷೀದ್ ಲತೀಫ್, ಮಾಜಿ ಆಟಗಾರರಾದ ಮೊಯ್ನ್ ಖಾನ್, ಸರ್ಫರಾಜ್ ಅಹ್ಮದ್, ಮೊಹ್ಸಿನ್ ಖಾನ್ ಅವರು ಭಾರತ ಎದುರಿನ ಪಂದ್ಯ ಬಹಿಷ್ಕರಿಸುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.
‘ಐಸಿಸಿಯು ಬಾಂಗ್ಲಾದೇಶಕ್ಕೆ ಏನು ಮಾಡಿದೆಯೊ ಅಥವಾ ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರಿಕೆಟ್ ಮಂಡಳಿಗೆ ಅದು ತಲೆಬಾಗಿರುವ ರೀತಿ ನೋಡಿದರೆ, ಯಾವುದಾದರೊಂದು ತಂಡ ಇಂಥ ಕ್ರಮಕೈಗೊಳ್ಳಲು ಸಕಾಲವಾಗಿತ್ತು’ ಎಂದು ಲತೀಫ್ ಹೇಳಿದ್ದಾರೆ.
‘ಭಾರತ ಎದುರಿನ ಪಂದ್ಯ ಆಡದಿರುವುದರಿಂದ ನಿರಾಶೆಯಾಗಿದೆ. ಕ್ರೀಡೆಯ ಜೊತೆ ರಾಜಕೀಯ ಬೆರೆಸುವುದಕ್ಕೆ ತಮ್ಮ ಸಹಮತವಿಲ್ಲ. ಆದರೆ ಸರ್ಕಾರದ ನಿಲುವನ್ನು ಅರ್ಥಮಾಡಿಕೊಳ್ಳುವುದಾಗಿ’ ಅಫ್ರಿದಿ ಹೇಳಿದ್ದಾರೆ.
ಪಿಸಿಬಿ ಬದ್ಧ:
ಒಂದು ವೇಳೆ ಬದ್ಧ ಎದುರಾಳಿಗಳಿಬ್ಬರು ನಾಕೌಟ್ನಲ್ಲಿ ಮುಖಾಮುಖಿಯಾಗುವ ಸಂದರ್ಭ ಎದುರಾದಲ್ಲಿ, ತಮ್ಮ ದೇಶದ ಸರ್ಕಾರ ನೀಡುವ ಸೂಚನೆಯಂತೆ ನಡೆದುಕೊಳ್ಳುವುದಾಗಿ ಪಿಸಿಬಿಯಲ್ಲಿ ಉನ್ನತ ಮೂಲವೊಂದು ತಿಳಿಸಿದೆ.
ಪಾಕಿಸ್ತಾನ ಫೆ. 7ರಂದು ನೆದರ್ಲೆಂಡ್ಸ್ ವಿರುದ್ಧ, 10ರಂದು ಅಮೆರಿಕ ವಿರುದ್ಧ ಮತ್ತು 18ರಂದು ನಮೀಬಿಯಾ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.