ಮೆಲ್ಬರ್ನ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಅವಕಾಶ ಉಳಿಸಿಕೊಳ್ಳುವ ಸಲುವಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ವಿರಾಟ್ ಕೊಹ್ಲಿಯನ್ನು ಕೆಣಕುವುದಿಲ್ಲ ಎಂದು ಈಚೆಗೆ ಮೈಕೆಲ್ ಕ್ಲಾರ್ಕ್ ಹೇಳಿದ ಮಾತನ್ನು ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅಲ್ಲಗಳೆದಿದ್ದಾರೆ.
‘ಆ ಸಂದರ್ಭದಲ್ಲಿ ಸ್ಥಿತಿ ಹಾಗಿತ್ತು. ಆ ಪ್ರಕರಣ (ಚೆಂಡು ವಿರೂಪ) ನಡೆದು ಐದಾರು ತಿಂಗಳಷ್ಟೇ ಕಳೆದಿತ್ತು. ತಂಡದ ಆಡಳಿತ ಮಂಡಳಿ, ಮಾಧ್ಯಮಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರ ಮೇಲೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದ್ದರಿಂದ ತಂಡದಲ್ಲಿ ಉತ್ತಮ ವಾತಾವರಣ ನೆಲೆಸುವಂತೆ ಮಾಡುವ ಅವಶ್ಯಕತೆ ಇತ್ತು. ಆದ್ದರಿಂದ ನಮ್ಮ ಆಕ್ರಮಣಕಾರಿ ಧೋರಣೆಗೆ ತುಸು ನಿಯಂತ್ರಣದಲ್ಲಿತ್ತು’ ಎಂದು ಕಮಿನ್ಸ್ ಹೇಳಿದ್ದಾರೆ.
2018–19ರಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡಿತ್ತು. ಅದರಲ್ಲಿ ವಿರಾಟ್ ಬಳಗವನ್ನು ಆಸ್ಟ್ರೇಲಿಯಾ ಆಟಗಾರರು ಕಟುವಾಗಿ ಕೆಣಕಿರಲಿಲ್ಲ. ಈ ಸರಣಿಗೂ ಕೆಲವು ತಿಂಗಳುಗಳ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಚೆಂಡು ವಿರೂಪ ಪ್ರಕರಣ ನಡೆದಿತ್ತು. ಅದರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಆರೋಪಿಗಳಾಗಿದ್ದರು.
‘ಕ್ರಿಕೆಟ್ ಅಂಗಳದಲ್ಲಿ ಸ್ನೇಹಿತರ ಮನಸ್ಸು ಜಯಿಸುವುದು ಮತ್ತು ಸೋಲುವುದು ದೊಡ್ಡದು. ಆದರೆ ಕೆಲವರಿಗೆ ಅದು ಮಹತ್ವದಾಗಿರಲಿಕ್ಕಿಲ್ಲ. ಪಂದ್ಯ ಜಯಿಸುವುದೇ ಎಲ್ಲಕ್ಕಿಂತ ಮುಖ್ಯ’ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.