ಲಾಹೋರ್: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಕೆಲವು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಏಷ್ಯಾ ಕ್ರಿಕೆಟ್ ಸಂಸ್ಥೆಯನ್ನು ಆಗ್ರಹಿಸಿದೆ.
ಈ ಕುರಿತು ಪಿಸಿಬಿಯು ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರು ಎಸಿಸಿ ಅಧ್ಯಕ್ಷ ಜಯ್ ಶಾಗೆ ಈ ಕುರಿತು ಪತ್ರ ಬರೆದಿದ್ದಾರೆಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪತ್ರದಲ್ಲಿ ಅಶ್ರಫ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಪಂದ್ಯಗಳು ಪಾಕಿಸ್ತಾನದ ಮೈದಾನಗಳಲ್ಲಿ ನಡೆದಿದ್ದರೆ ಟಿಕೆಟ್ ಆದಾಯ ಪಿಸಿಬಿಗೆ ದೊರೆಯುತ್ತಿತ್ತು. ಈಗ ಅದು ಕೈತಪ್ಪಿದೆ. ಅಲ್ಲದೇ ಪಂದ್ಯಗಳನ್ನು ಸ್ಥಳಾಂತರ ಮಾಡುವಾಗ ಸದಸ್ಯ ರಾಷ್ಟ್ರಗಳಿಂದ ಅಭಿಪ್ರಾಯ ಸಂಗ್ರಹಿಸಿರಲಿಲ್ಲ. ಎಸಿಸಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.
ಪಂದ್ಯಗಳನ್ನು ಆಯೋಜಿಸುವ ತಾಣಗಳನ್ನು ಆಯ್ಕೆ ಮಾಡುವಾಗಲೂ ಆತಿಥೇಯ ಪಾಕ್ ಮಂಡಳಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.