ADVERTISEMENT

ಕ್ರಿಕೆಟಿಗ ಪೃಥ್ವಿ ಶಾ ಜೊತೆ ಕಿರಿಕ್ ಮಾಡಿಕೊಂಡ ಆ ಸುಂದರಿ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2023, 11:37 IST
Last Updated 17 ಫೆಬ್ರುವರಿ 2023, 11:37 IST
ಸಪ್ನಾ ಗಿಲ್
ಸಪ್ನಾ ಗಿಲ್   

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಹಾಗೂ ಅವರ ಕಾರಿನ ಮೇಲೆ ಕೆಲವರು ದಾಳಿ ಮಾಡಿದ ಘಟನೆ ಬುಧವಾರ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯಲು ಪ್ರಮುಖ ಕಾರಣಿಭೂತಳು ಎಂದು ಹೇಳಲಾದ ನಟಿ ಹಾಗೂ ಡಿಜಿಟಲ್ ಕ್ರಿಯೇಟರ್ ಸಪ್ನಾ ಗಿಲ್ ಅವರನ್ನು ಮುಂಬೈ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸಪ್ನಾ ಗಿಲ್ ಬಾಯ್‌ಫ್ರೆಂಡ್‌, ಪೃಥ್ವಿ ಶಾ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ವಿಷಯವಾಗಿ ಗಲಾಟೆ ನಡೆದಿತ್ತು. ಬಳಿಕ ಪಾನಮತ್ತರಾಗಿದ್ದ ಸಪ್ನಾ ಹಾಗೂ ಆಕೆಯ ಸ್ನೇಹಿತರು ಪೃಥ್ವಿ ಶಾ ಜೊತೆ ಜಗಳ ತೆಗೆದು ಶಾ ಕಾರಿನ ಮೇಲೆ ದಾಳಿ ಮಾಡಿದ್ದರು. ‘ಅಲ್ಲದೇ ಅಪಘಾತ ಮಾಡಿದ್ದಿರಾ’ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಾಂತಾಕ್ರೂಜ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ADVERTISEMENT

ಭೋಜಪುರಿ ನಟಿಯಾಗಿರುವ ಸಪ್ನಾ ಗಿಲ್ ಕೆಲ ಭೋಜಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಭೋಜಪುರಿ ಖ್ಯಾತನಾಮ ನಟರಾದ ರವಿ ಕಿಶನ್ ಹಾಗೂ ದಿನೇಶ್ ಲಾಲ್ ಯಾದವ್ ಜೊತೆಗೂ ನಟಿಸಿದ್ದಾರೆ.

ಸದ್ಯ ಮುಂಬೈನಲ್ಲಿ ನೆಲೆಸಿರುವ ಸಪ್ನಾ ಗಿಲ್ ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದು 3 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಮಧ್ಯರಾತ್ರಿ ಸ್ನೇಹಿತರ ಜೊತೆ ಪಾನಮತ್ತರಾಗಿದ್ದರು ಎಂದು ಹೇಳಲಾದ ಈ ನಟಿ ಇದೀಗ ಟೀಂ ಇಂಡಿಯಾ ಆಟಗಾರನ ಜೊತೆ ಕಿರಿಕ್ ಮಾಡಿಕೊಂಡು ಪೊಲೀಸರ ಅಥಿತಿಯಾಗಿದ್ದಾರೆ.

ಘಟನೆ ಏನಾಗಿತ್ತು?

ಬುಧವಾರ ರಾತ್ರಿ ಶಾ ಹಾಗೂ ಅವರ ಸ್ನೇಹಿತ ಇಬ್ಬರೂ ಹೋಟೆಲ್‌ಗೆ ಊಟಕ್ಕೆ ಬಂದಿದ್ದರು. ಅದೇ ಸಂದರ್ಭದಲ್ಲಿ ಹೋಟೆಲ್ ಆವರಣದಲ್ಲಿ ವ್ಯಕ್ತಿಯೊಬ್ಬ ಪೃಥ್ವಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳಲು ಮನವಿ ಮಾಡಿದ. ಅದಕ್ಕೆ ಸಮ್ಮತಿಸಿದ ಪೃಥ್ವಿ ಚಿತ್ರ ತೆಗೆಸಿಕೊಂಡರು. ಆದರೆ ಆ ವ್ಯಕ್ತಿಯು ಮತ್ತಷ್ಟು ಸೆಲ್ಫಿ ತೆಗೆಸಿಕೊಳ್ಳಲು ಒತ್ತಾಯಿಸಿದಾಗ ಪೃಥ್ವಿ ನಿರಾಕರಿಸಿದರು. ಆಗ ಆ ವ್ಯಕ್ತಿಯು ಪೃಥ್ವಿಯೊಂದಿಗೆ ದುರ್ವರ್ತನೆ ತೋರಿದನೆನ್ನಲಾಗಿದೆ. ವಾಗ್ವಾದವೂ ನಡೆಯಿತು. ಆಗ ಮಧ್ಯಪ್ರವೇಶಿಸಿದ ಹೋಟೆಲ್ ಮ್ಯಾನೇಜರ್ ಆರೋಪಿಯನ್ನು ಹೊರಗೆ ಕಳುಹಿಸಿದ್ದಾರೆ. ಪೃಥ್ವಿ ಹಾಗೂ ಆಶಿಶ್ ಊಟ ಮುಗಿಸಿ ಕಾರು ಹತ್ತಿ ಕುಳಿತರು. ಇದೇ ಸಂದರ್ಭದಲ್ಲಿ ಬೇಸ್‌ಬಾಲ್ ಬ್ಯಾಟ್‌ ಹಿಡಿದು ಬಂದ ಆರೋಪಿಯು ಕಾರಿನ ಗಾಜು ಒಡೆದು ಹಾಕಿದ.

‘ಘಟನೆಯಲ್ಲಿ ಇಬ್ಬರಿಗೂ ಯಾವುದೇ ಗಾಯಗಳಾಗಲಿಲ್ಲ. ಅವರಿಬ್ಬರನ್ನು ಬೇರೆ ಕಾರಿನಲ್ಲಿ ಕಳಿಸಿಕೊಡಲಾಯಿತು. ಆ ಕಾರನ್ನು ಮೂರು ಬೈಕ್‌ಗಳ ಮೇಲೆ ಕೆಲವರು ಹಿಂಬಾಲಿಸಿದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಿಳಿ ಬಣ್ಣದ ಒಂದು ಕಾರಿನಲ್ಲಿಯೂ ಕೆಲವರು ಬೆನ್ನಟ್ಟಿ ಬಂದರು. ಮತ್ತೆ ಮೂರು ಬೈಕ್‌ಗಳೂ ಸೇರಿಕೊಂಡವು. ಬೈಕ್‌ನಲ್ಲಿದ್ದವನೊಬ್ಬ ತನ್ನ ಬೇಸ್‌ಬ್ಯಾಟ್‌ ಅನ್ನು ಪೃಥ್ವಿ ಇದ್ದ ಕಾರಿಗೆ ಬೀಸಿದ. ಆಶಿಶ್ ಯಾದವ್ ಕಾರನ್ನು ಒಶಿವಾರಾ ಪೊಲೀಸ್ ಠಾಣೆಗೆ ಒಯ್ದರು. ಎಂಟು ಆರೋಪಿಗಳ ಪೈಕಿ ಇದ್ದ ಮಹಿಳೆಯು ₹ 50 ಸಾವಿರ ನೀಡುವಂತೆ ಯಾದವ್‌ಗೆ ಬೆದರಿಕೆ ಒಡ್ಡಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಬೆದರಿಕೆ, ವಸೂಲಿ ಹಾಗೂ ಗಂಭೀರ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.