ಮೊಹಾಲಿ (ಪಿಟಿಐ): ಆಟಗಾರರ ಗಾಯದ ಸಮಸ್ಯೆ ಮತ್ತು ಪ್ರಮುಖ ವಿದೇಶಿ ಆಟಗಾರರ ಅಲಭ್ಯತೆಯಿಂದ ಹಿನ್ನಡೆ ಅನುಭವಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಎದುರಾಗಲಿವೆ.
ಇವೆರಡು ತಂಡಗಳು ಈಚೆಗಿನ ಕೆಲ ಟೂರ್ನಿಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದ್ದವು. ಕಳೆದ ಆವೃತ್ತಿಯಲ್ಲಿ ಪಂಜಾಬ್ ಆರನೇ ಸ್ಥಾನ ಪಡೆದುಕೊಂಡಿದ್ದರೆ, ಕೆಕೆಆರ್ ಏಳನೇ ಸ್ಥಾನ ಗಳಿಸಿತ್ತು.
ಈ ಬಾರಿ ಎರಡೂ ತಂಡಗಳು ನೂತನ ನಾಯಕರ ನೇತೃತ್ವದಲ್ಲಿ ಆಡಲಿವೆ. ಪಂಜಾಬ್ ತಂಡವನ್ನು ಶಿಖರ್ ಧವನ್ ಹಾಗೂ ಕೋಲ್ಕತ್ತ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡಿರುವ ಕಾರಣ ನಿತೀಶ್ಗೆ ನಾಯಕತ್ವದ ಹೊಣೆ ದೊರೆತಿದೆ.
ಜಾನಿ ಬೆಸ್ಟೊ ಅವರು ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿರುವುದು ಪಂಜಾಬ್ಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಲಿಯಾಮ್ ಲಿವಿಂಗ್ಸ್ಟೋನ್, ಕಗಿಸೊ ರಬಾಡ ಅವರ ಅನುಪಸ್ಥಿತಿ ಕೂಡಾ ಮೊದಲ ಪಂದ್ಯದಲ್ಲಿ ಕಾಡಲಿದೆ.
ಇದರಿಂದ ಆಲ್ರೌಂಡರ್ ಸ್ಯಾಮ್ ಕರನ್ ಮೇಲಿನ ಹೊರೆ ಹೆಚ್ಚಿದೆ. ಬೆಸ್ಟೊ ಬದಲು ತಂಡವನ್ನು ಸೇರಿರುವ ಮ್ಯಾಥ್ಯೂ ಶಾರ್ಟ್ ಅವರು ಧವನ್ ಜತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಕೆಕೆಆರ್ ತಂಡಕ್ಕೂ ಪ್ರಮುಖ ಆಟಗಾರರ ಅಲಭ್ಯತೆ ಕಾಡುತ್ತಿದೆ. ಬೆನ್ನುನೋವಿನ ಕಾರಣ ಶ್ರೇಯಸ್ ಅವರು ಇಡೀ ಟೂರ್ನಿಯಲ್ಲಿ ಆಡುವುದು ಅನುಮಾನ. ಬಾಂಗ್ಲಾದೇಶದ ಶಕೀಲ್ ಅಲ್ ಹಸನ್ ಮತ್ತು ಲಿಟನ್ ದಾಸ್ ಕೂಡಾ ಶನಿವಾರದ ಪಂದ್ಯದಲ್ಲಿ ಆಡುತ್ತಿಲ್ಲ.
ಪಂದ್ಯ ಆರಂಭ: ಮಧ್ಯಾಹ್ನ 3.30
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.