ADVERTISEMENT

ರಣಜಿ ಕ್ರಿಕೆಟ್ | ವೈಶಾಖ, ಶ್ರೇಯಸ್ ದಾಳಿ; ಕರ್ನಾಟಕಕ್ಕೆ ಜಯ

ಬಿಹಾರದ ಶಕೀಬುಲ್ ಗಣಿ ಶತಕ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 13:33 IST
Last Updated 29 ಅಕ್ಟೋಬರ್ 2024, 13:33 IST
ವೈಶಾಖ ವಿಜಯಕುಮಾರ್ ಮತ್ತು ಶ್ರೇಯಸ್ ಗೋಪಾಲ್ 
ವೈಶಾಖ ವಿಜಯಕುಮಾರ್ ಮತ್ತು ಶ್ರೇಯಸ್ ಗೋಪಾಲ್    

ಪಟ್ನಾ: ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮಧ್ಯಮವೇಗಿ ವೈಶಾಖ ವಿಜಯಕುಮಾರ್ ಮತ್ತು ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. 

ಸಿ ಗುಂಪಿನ ಮೊದಲೆರಡೂ ಪಂದ್ಯಗಳು ಮಳೆಗೆ ಕೊಚ್ಚಿಹೋಗಿದ್ದವು. ಆದರೆ ಮೂರನೇ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು 8 ವಿಕೆಟ್‌ಗಳಿಂದ ಬಿಹಾರ ವಿರುದ್ಧ ಜಯಿಸಿತು. 6 ಅಂಕಗಳನ್ನು ತನ್ನದಾಗಿಸಿಕೊಂಡಿತು. ವೈಶಾಖ (44ಕ್ಕೆ3) ಮತ್ತು ಶ್ರೆಯಸ್ (70ಕ್ಕೆ4) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಹಾರ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಬಹಳಷ್ಟು ಪ್ರಯತ್ನಿಸಿತು. ತಂಡದ ಬಲಗೈ ಬ್ಯಾಟರ್ ಶಕೀಬುಲ್ ಗಣಿ (130; 194ಎ, 4X15, 6X4) ಸುಂದರ ಶತಕ ಕೂಡ ದಾಖಲಿಸಿದರು. ಆದರೂ ಕರ್ನಾಟಕ ತಂಡದ ಬೌಲರ್‌ಗಳು ಬಿಹಾರ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಕಟ್ಟಿಹಾಕಿತು. ಅದರಿಂದಾಗಿ ಲಭಿಸಿದ 69 ರನ್‌ಗಳ ಗುರಿಯನ್ನು 10.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ಬ್ಯಾಟರ್ ನಿಕಿನ್ ಜೋಸ್ (ಔಟಾಗದೆ 28) ಮತ್ತು ಅಭಿನವ್ ಮನೋಹರ್ (ಔಟಾಗದೆ 17) ತಂಡವನ್ನು ಗೆಲುವಿನ ದಡ ಸೇರಿಸಿದರು. 

ADVERTISEMENT

ಬಿಹಾರ ತಂಡವು ಮೊದಲ ಇನಿಂಗ್ಸ್‌ನಲ್ಲಿ 143 ರನ್‌ ಗಳಿಸಿತ್ತು. ಆದರೆ ಎರಡನೇ ದಿನದಾಟವು ಮಳೆಯಿಂದಾಗಿ ನಡೆದಿರಲಿಲ್ಲ. ಮೂರನೇ ದಿನ ಮತ್ತು ನಾಲ್ಕನೇ ದಿನದ ಬೆಳಿಗ್ಗೆ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ ಮಯಂಕ್ ಅಗರವಾಲ್  ಶತಕ ಮತ್ತು ಮನೀಷ್ ಪಾಂಡೆ ಅರ್ಧಶತಕದ ಬಲದಿಂದ 51 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 287 ರನ್ ಗಳಿಸಿತು. 144 ರನ್‌ಗಳ ಮುನ್ನಡೆ ಸಾಧಿಸಿತು. 

ಕರ್ನಾಟಕದ ಬೌಲರ್‌ಗಳು ಮೊದಲಿಗೆ ಇನಿಂಗ್ಸ್‌ ಜಯಕ್ಕಾಗಿ ಪ್ರಯತ್ನ ನಡೆಸಿದರು. ಈ ನಿಟ್ಟಿನಲ್ಲಿ ವೇಗದ ಜೋಡಿ ವಿ. ಕೌಶಿಕ್ ಮತ್ತು ವೈಶಾಖ ಅವರು ಉತ್ತಮ ಆರಂಭ ನೀಡಿದರು. ಬಿಹಾರ ತಂಡವು 6 ರನ್‌ಗಳಿಗೆ 2 ವಿಕೆಟ್ ಕಳೆದುಕೊಳ್ಳಲು ಕಾರಣರಾದರು. 

ಆದರೆ ಈ ಸಂದರ್ಭದಲ್ಲಿ ಗಣಿ ಮತ್ತು ಬಾಬುಲ್ ಕುಮಾರ್ (44; 111ಎ) ಬೌಲರ್‌ಗಳನ್ನು ಕಾಡಿದರು. 3ನೇ ವಿಕೆಟ್ ಜೊತೆಯಾಟದಲ್ಲಿ 130 ರನ್‌ ಸೇರಿಸಿದರು. ಇದರಿಂದಾಗಿ ಕರ್ನಾಟಕಕ್ಕೆ ಇನಿಂಗ್ಸ್‌ ಜಯಸಾಧಿಸುವ ಗುರಿ ಕೈತಪ್ಪಿತು. ಆದರೂ ಗೆಲುವಿನ ಆಸೆ ಬಿಡಲಿಲ್ಲ. 40ನೇ ಓವರ್‌ನಲ್ಲಿ ಬಾಬುಲ್ ಕುಮಾರ್ ವಿಕೆಟ್ ಗಳಿಸಿದ ಶ್ರೇಯಸ್ ಜೊತೆಯಾಟವನ್ನು ಮುರಿದರು. ಇಲ್ಲಿಂದ ಮುಂದೆ ಯಾವ ಬ್ಯಾಟರ್‌ ಕೂಡ ಕ್ರೀಸ್‌ನಲ್ಲಿ ಕಾಲೂರದಂತೆ ಬೌಲರ್‌ಗಳು ದಾಳಿ ನಡೆಸಿದರು. 

ಈ ನಡುವೆಯೂ ಶತಕ ಗಳಿಸಿದ ಶಕೀಬುಲ್ ಕೊನಯವರಾಗಿ  ಔಟಾದರು. ವಿದ್ಯಾಧರ್ ಪಾಟೀಲ ಅವರು ಶಕೀಬುಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.