ಬೆಂಗಳೂರು: ಕರ್ನಾಟಕ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಜಮ್ಮು–ಕಾಶ್ಮೀರ ತಂಡವನ್ನು ಎದುರಿಸುವುದು ಖಚಿತವಾಗಿದೆ. ಫೆಬ್ರುವರಿ 20 ರಿಂದ 24ರವರೆಗೆ ಕ್ವಾರ್ಟರ್ಫೈನಲ್ ಪಂದ್ಯಗಳು ನಡೆಯಲಿವೆ.
ಶನಿವಾರ ಮುಕ್ತಾಯಗೊಂಡ ಸಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕಾಶ್ಮೀರ ತಂಡವು, ಹರಿಯಾಣ ಎದುರು ಎರಡು ವಿಕೆಟ್ಗಳಿಂದ ಸೋಲನುಭವಿಸಿತು. ಆದರೆ ಒಟ್ಟು 39 ಪಾಯಿಂಟ್ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ ಕಾಶ್ಮೀರ ಕ್ವಾರ್ಟರ್ಫೈನಲ್ ಪ್ರವೇಶಿಸಿತು. ಈ ತಂಡ ಆಡಿದ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಜಯಗಳಿಸಿದೆ. ಎರಡರಲ್ಲಿ ಡ್ರಾ ಸಾಧಿಸಿದೆ. ಒಂದರಲ್ಲಿ ಸೋತಿದೆ. ಇದರಿಂದಾಗಿ ‘ಎ–ಬಿ’ ಜಂಟಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಕಾಶ್ಮೀರ ಎದುರಿಸಲಿದೆ.
ಆದರೆ ಈ ಪಂದ್ಯ ನಡೆಯುವ ಸ್ಥಳ ಇನ್ನೂ ನಿಗದಿಯಾಗಿಲ್ಲ. ನಿಗದಿಯಾಗಿರುವ ವೇಳಾಪಟ್ಟಿಯಂತೆ ಈ ಪಂದ್ಯಕ್ಕೆ ಜಮ್ಮು–ಕಾಶ್ಮೀರ ತಂಡ ಆತಿಥ್ಯ ವಹಿಸಬೇಕು. ಆದ್ದರಿಂದ ಜಮ್ಮುವಿನಲ್ಲಿ ಪಂದ್ಯ ನಡೆಯಬೇಕು. ಆದರೆ, ಅಲ್ಲಿ ಕಾನೂನು–ಸುವ್ಯವಸ್ಥೆ ಸಮಸ್ಯೆಗಳಿರುವುದರಿಂದ ಪಂದ್ಯ ನಡೆಸುವುದು ಕಷ್ಟವೆನ್ನಲಾಗಿದೆ.
‘ಈಗಿರುವ ಪರಿಸ್ಥಿತಿಯಲ್ಲಿ ಜಮ್ನುವಿನಲ್ಲಿ ಪಂದ್ಯ ನಡೆಸುವುದು ಸಾಧ್ಯವಿಲ್ಲವೆನಿಸುತ್ತಿದೆ. ಆದ್ದರಿಂದ ಈ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದೇವೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಲೀಗ್ ಹಂತದಲ್ಲಿ ಕಾಶ್ಮೀರ ಮತ್ತು ಅಸ್ಸಾಂ, ಛತ್ತೀಸಗಡ ಮತ್ತು ಹರಿಯಾಣದ ಎದುರಿನ ಪಂದ್ಯಗಳು ಜಮ್ಮುವಿನ ಗಾಂಧಿ ಸ್ಮಾರಕ ವಿಜ್ಞಾನ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದಿವೆ.
ರಾಹುಲ್–ಪಾಂಡೆ ಆಟ?
ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಆಡಿ ಮರಳಿರುವ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರು ಕ್ವಾರ್ಟರ್ಫೈನಲ್ನಲ್ಲಿ ಆಡುವ ಸಾಧ್ಯತೆ ಇದೆ.ಕಿವೀಸ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ರಾಹುಲ್ ಶತಕ ಬಾರಿಸಿದ್ದರು. ವಿಕೆಟ್ಕೀಪಿಂಗ್ನಲ್ಲಿಯೂ ಮಿಂಚಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.